ಉಡುಪಿ: ಗ್ಲೋಬಲ್ ವಾರ್ಮಿಂಗ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ವಿಶ್ವದಾದ್ಯಂತ ಹಲವು ರಾಷ್ಟ್ರಗಳು ಉಷ್ಣತೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಅಭಿವೃದ್ಧಿ ಹೆಸರಲ್ಲಿ ಕಾಡಿನ ನಾಶವೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ. ಉಸಿರು ನೀಡುವ ಹಸಿರಿಗಾಗಿ ಉಡುಪಿಯಲ್ಲಿ ಸೀಡ್ ಬಾಲ್ ಅಭಿಯಾನ ಶುರುವಾಗಿದೆ. ಪೇಜಾವರ ಕಿರಿಯ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡಿದರು.
ಕಾಲಕಾಲಕ್ಕೆ ಮಳೆ ಬರಲ್ಲ. ಬೇಸಿಗೆ ಶುರುವಾಗೋ ಮೊದಲೇ ನೀರು ಬತ್ತಿ ಹೋಗುತ್ತಿದೆ. ಸೂರ್ಯನ ಶಾಖ ವಿಪರೀತವಾಗಿದ್ದು ಉಷ್ಣಾಂಶದಲ್ಲಿ ಏರುಪೇರಾಗಿದೆ. ಕಾಡು ನಾಶವೇ ಇದಕ್ಕೆಲ್ಲಾ ಮೂಲಕಾರಣ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣಮಠದಲ್ಲಿ ಉತ್ತಿಷ್ಟ ಭಾರತ ತಂಡ ಸೀಡ್ ಬಾಲ್ ಅಭಿಯಾನ ಶುರುಮಾಡಿದೆ. ಮಠದ ರಾಜಾಂಗಣದಲ್ಲಿ ನೂರಾರು ಮಂದಿ ಯುವಕರು ಹಾಗು ಮಹಿಳೆಯರು ಬೀಜದುಂಡೆಗಳನ್ನು ತಯಾರು ಮಾಡಿದರು.
ಹಿಂದೆಲ್ಲಾ ಬೀಜೋತ್ಪತ್ತಿ ತನ್ನಿಂದ ತಾನೆ ನಡೆಯುತ್ತಿತ್ತು. ಆದ್ರೆ ಈಗ ಪರಿಸ್ಥಿತಿ ಹಾಗೆ ಇಲ್ಲ. ನೆರವಾಗಿ ಬೀಜ ಒಗೆದರೆ, ಅದು ಮೊಳೆಕೆಯೊಡೆಯಲ್ಲ. ಭೂಮಿಯಲ್ಲಿ ಪೋಷಕಾಂಶ ಇರಲಿಕ್ಕಿಲ್ಲ. ಆ ನಿಟ್ಟಿನಲ್ಲಿ ಬೀಜದುಂಡೆ ಮಾಡಲಾಗುತ್ತಿದೆ. ಸಣ್ಣಪುಟ್ಟ ಸಂಘಟನೆ ತೊಡಗಿಸಿಕೊಳ್ಳಬೇಕು. ಪರಿಸರ ರಕ್ಷಣೆ ಮಾಡಿದ್ರೆ ನಮ್ಮ ರಕ್ಷಣೆ ಮಾಡಿದಂತೆ. ಹೀಗಾಗಿ ಇಂದಿನ ಪೀಳಿಗೆಗೆ ನಮ್ಮ ಹಿರಿಯರು ಪರಿಸರ ಉಳಿಸಿದ್ದಾರೆ. ನಾವು ಮುಂದಿನ ಪೀಳಿಗೆಗೆ ಎನು ಮಾಡಿದ್ದೆವೆ ಎಂಬ ಪ್ರಶ್ನೆ ಹಾಕಿಕೊಂಡು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ತಿಳಿಸಿದರು.
ಏನಿದು ಬೀಜದುಂಡೆ ಕಾನ್ಸೆಪ್ಟ್?:
ಮಣ್ಣು- ಸಗಣಿ- ಗೋಮೂತ್ರವನ್ನು ಮಿಶ್ರಣ ಮಾಡಿ ಮಣ್ಣಿನ ಉಂಡೆಯನ್ನು ತಯಾರು ಮಾಡಿ, ಅದರೊಳಗೆ ಬೀಜವಿಟ್ಟು ಮುಚ್ಚಲಾಗುತ್ತದೆ. ಬೀಜದುಂಡೆಯನ್ನು ಹದ ಬಿಸಿಲಿನಲ್ಲಿ ಒಂದೆರಡು ದಿನ ಒಣಗಿಸಿ, ಮಳೆಗಾಲ ಆರಂಭದಲ್ಲಿ ಅಲ್ಲಲ್ಲಿ ಈ ಬೀಜದುಂಡೆಗಳನ್ನು ಎಸೆಯಲಾಗುತ್ತದೆ. ಮಳೆ ಬಿದ್ದೊಡನೆ ಮಣ್ಣು ತೇವಗೊಂಡು ಬೀಜ ಮೊಳಕೆಯೊಡೆಯುತ್ತದೆ. ಸಸಿಗೆ ಬೇಕಾದಷ್ಟು ಪೋಷಕಾಂಶ ಸುತ್ತಲೂ ಮೊದಲೇ ರೆಡಿಯಾಗಿರುತ್ತದೆ. ಗಿಡ ಮರವಾಗಿ ಬೆಳೆಯುತ್ತದೆ ಎಂಬೂದು ಈ ಸೀಡ್ ಬಾಲ್ ನ ಕಾನ್ಸೆಪ್ಟ್.
ಉತ್ತಿಷ್ಟ ಭಾರತ ತಂಡ ರಾಜ್ಯಾದ್ಯಂತ ಈವರೆಗೆ 18 ಲಕ್ಷದಷ್ಟು ಸೀಡ್ ಬಾಲ್ ತಯಾರಿ ಮಾಡಿ ಎಸೆದಿದೆ. ಉಡುಪಿಯಲ್ಲಿ ಒಂದು ಲಕ್ಷದಷ್ಟು ಬೀಜದುಂಡೆ ತಯಾರು ಮಾಡುವ ಗುರಿಯನ್ನು ಹೊಂದಿದೆ.
ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಈ ಅಭಿಯಾನ ಮಾಡಿದ್ದೆವು. ಇದೀಗ ಉಡುಪಿಗೆ ಬಂದಿದ್ದೇವೆ. ಐದಾರು ವರ್ಷಗಳಲ್ಲಿ ಬೃಹತ್ ಮರವಾಗಿ ಬೆಳೆಯುವ ಬೀಜಗಳನ್ನು ಈಗ ಬಿತ್ತುತ್ತಿದ್ದೇವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉತ್ತಿಷ್ಟ ಭಾರತ ಸಂಘಟನೆಯ ಕಾರ್ಯಕರ್ತ ಪ್ರಕಾಶ್ ಹೇಳಿದ್ದಾರೆ.