ರಾಮನಗರ: ಬಹಿರ್ದೆಸೆಗೆ ಹೋಗಿದ್ದ ಗರ್ಭಿಣಿ ಮೇಲೆ ಕರಡಿ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಚೌಕಸಂದ್ರ ಗ್ರಾಮದಲ್ಲಿ ನಡೆದಿದೆ.
ಚೌಕಸಂದ್ರ ಗ್ರಾಮದ ಪ್ರದೀಪ್ ಕುಮಾರ್ ನಾಯಕ್ ಎಂಬವರ ಪತ್ನಿ ಸುಮಾಭಾಯಿ(25) ಮೃತ ದುರ್ದೈವಿ. ಇಂದು ಬೆಳಿಗ್ಗೆ ಸುಮಾರು 5 ಗಂಟೆಯ ವೇಳೆ ಬಹಿರ್ದೆಸೆಗೆ ಸುಮಾಭಾಯಿ ಮನೆಯ ಹಿಂಬದಿ ಹೋಗಿದ್ದರು. ಈ ವೇಳೆ ಕರಡಿ ದಾಳಿ ನಡೆಸಿದ್ದು ಕುತ್ತಿಗೆ ಭಾಗದಲ್ಲಿ ಕಚ್ಚಿ, ಕೊರಳನ್ನು ಪರಚಿದೆ.
ಕರಡಿ ಕುತ್ತಿಗೆ ಭಾಗ ಕಚ್ಚಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸುಮಾಭಾಯಿ ಸಾವನ್ನಪ್ಪಿದ್ದಾರೆ. ಸುಮಭಾಯಿಗೆ ಗಂಡು ಮಗುವಿದ್ದು, ಮತ್ತೊಂದು ಮಗುವಿಗೆ ಗರ್ಭಿಣಿಯಾಗಿದ್ದರು. ಗ್ರಾಮಸ್ಥರು ಚಿರತೆ ದಾಳಿಯಿಂದ ಸುಮಭಾಯಿ ಸಾವನ್ನಪ್ಪಿದ್ದಾಳೆ ಎಂದುಕೊಂಡಿದ್ದರು. ಆದ್ರೆ ಕರಡಿ ಕುತ್ತಿಗೆ ಭಾಗದಲ್ಲಿ ಕಚ್ಚಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಕನಕಪುರ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕರಡಿ ದಾಳಿಯಿಂದ ಆಗಿರುವ ಸಾವು ಎಂದು ದೃಢಪಡಿಸಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.