ಧಾರವಾಡ: ಇತ್ತೀಚಿಗೆ ಸ್ಯಾಂಡಲ್ ವುಡ್ ನಟ-ನಟಿಯರು ರಾಜಕೀಯದತ್ತ ಮುಖ ಮಾಡಿದ್ದಾರೆ. ಉಪೇಂದ್ರ, ಮಾಲಾಶ್ರೀ ಮತ್ತು ಸಾಧು ಕೋಕಿಲ ರಾಜಕೀಯಕ್ಕೆ ಮುಖ ಮಾಡಿದ್ದು, ಈಗ ಈ ಸಾಲಿಗೆ ಬಿಗ್ಬಾಸ್ ವಿಜೇತ ಪ್ರಥಮ್ ಕೂಡ ಸೇರಿದ್ದಾರೆ.
ನಗರದ ಶಾಲೆಯೊಂದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಪ್ರಥಮ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 3-4 ದಶಕಗಳಿಂದ ಚಾಮರಾಜನಗರ ಜಿಲ್ಲೆಯ ಹಾನೂರು ಒಂದು ತಾಲೂಕು ಆಗಬೇಕೆಂಬುದು ಎಲ್ಲರ ಆಸೆಯಾಗಿತ್ತು. ಆದರೆ ಈಗ ಸಿದ್ದರಾಮಯ್ಯನವರು ಹಾನೂರನ್ನು ತಾಲೂಕಾಗಿ ಘೋಷಣೆ ಮಾಡಿದ್ದಾರೆ. ಸಿದ್ರಾಮಣ್ಣ ಅವರ ನಾಯಕತ್ವದಲ್ಲಿ ಹಾನೂರು ತಾಲೂಕಾಗಿರೋದರಿಂದ ನಾನು ಮುಖ್ಯಮಂತ್ರಿಗಳನ್ನು ಅಭಿನಂದಿಸಿದೆ. ಯಾರಾದರೂ ಒಳ್ಳೆ ಕೆಲಸ ಮಾಡಿದ್ದರೆ ನಾವು ಅಭಿನಂದಿಸಬೇಕು ಎಂದರು.
ಈಗ ಹಾನೂರು ತಾಲೂಕು ಘೋಷಣೆ ಆಗಿದ್ದರಿಂದ ಈ ಹೊಸ ತಾಲೂಕಿಗೆ ನಾನು ಶಾಸಕನಾಗಬೇಕೆಂಬು ಎನ್ನುವ ಆಸೆಯಿದೆ. ಅದಕ್ಕೆ ನಾನು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಕೋತಿ ನನ್ ಮಗ ಇರಬಹುದು ಆದರೆ ಕಳ್ಳ್ ನನ್ ಮಗ ನಾನಲ್ಲ. ಹಾಗಾಗಿ ನಾನು ಒಬ್ಬ ಪರಿಪೂರ್ಣ, ಪ್ರಮಾಣಿಕ ವ್ಯಕ್ತಿಯಾಗಿ ಕೆಲಸಗಳನ್ನು ಮಾಡಬೇಕು. ರಾಜಕೀಯ ನನ್ನ ಇಷ್ಟದ ಕ್ಷೇತ್ರ, ಸಿನಿಮಾ ಅಲ್ಲ. ಸಿನಿಮಾಗೆ ನಾನು ನಿರ್ದೇಶಕನಾಗಲೂ ಬಂದೆ. ಆದರೆ ಈಗ ನಿರ್ದೇಶನಕ್ಕೆ ಅವಕಾಶ ಇಲ್ಲ ಎಂದು ಪ್ರಥಮ್ ಹೇಳಿದರು.
ನನಗಿರುವ ಮಾಹಿತಿಯ ಪ್ರಕಾರ ಮಾರ್ಚ್ 8ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಸಿಎಂ ಸರ್ ಅಲ್ಲಿ ಯಾರನ್ನೂ ನಿಲ್ಲಿಸಬೇಡಿ, ನಾನು ಅಲ್ಲಿ ಗೆದ್ದು ಬರುತ್ತೇನೆ ಎಂದು ಹೇಳಿದಾಗ ಮಾಧ್ಯಮದವರು ನೀವು ಕಾಂಗ್ರೆಸ್ ನಿಂದ ಕಣಕ್ಕೆ ಇಳಿಯುತ್ತಿದ್ದೀರಾ ಎಂದು ಕೇಳಿದರು. ಅದಕ್ಕೆ ನಾನು ಸಿದ್ದರಾಮಯ್ಯನವರಲ್ಲಿ ಟಿಕೆಟ್ ಕೇಳಲಿಲ್ಲ. ನಾನು ಯಾಕೆ ಟಿಕೆಟ್ ಕೇಳಲಿ. ಪಕ್ಷೇತರನಾಗಿಯೂ ನಿಲ್ಲಬಹುದಲ್ಲ ಅಥವಾ ಬೇರೆ ಪಕ್ಷದಿಂದಲೂ ಸ್ಪರ್ಧಿಸಬಹುದಲ್ಲವೇ ಎಂದು ಪ್ರಥಮ್ ಮರು ಪ್ರಶ್ನೆ ಹಾಕಿದರು.
ಏನೂ ಇಲ್ಲದೆ ನಾನು ಕೆಲಸ ಮಾಡುತ್ತಿದ್ದೇನೆ. ಜನರ ಧ್ವನಿಯಾಗಲು ನಾನು ಇಷ್ಟಪಡುತ್ತೇನೆ. ಅದಕ್ಕೆ ಎಲ್ಲ ತಯಾರಿ ನಡೆಯುತ್ತಿದೆ. ಖಂಡಿತವಾಗಿಯೂ ನಾನು ಕೆಲಸ ಮಾಡುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ನತ್ತ ಮಾಲಾಶ್ರೀ, ಸಾಧು ಕೋಕಿಲ ಚಿತ್ತ?