ಬೆಂಗಳೂರು: ಬೇಸಿಗೆಯಲ್ಲಿ ವಿದ್ಯುತ್ ದರ ಏರಿಸಲು ಸರ್ಕಾರ ಮುಂದಾಗಿದೆ. ಅದರಲ್ಲೂ ಇಂಧನ ಸಚಿವ ಡಿಕೆ ಶಿವಕುಮಾರ್ ಅವರೇ ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.
5 ವಿದ್ಯುತ್ ಸರಬರಾಜು ಕಂಪೆನಿಗಳಿಂದ ಪ್ರಸ್ತಾವನೆ ಬಂದಿದ್ದು, ಪ್ರತಿ ಯೂನಿಟ್ಗೆ 1 ರೂಪಾಯಿ 48 ಪೈಸೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಮಾರ್ಚ್ನಲ್ಲಿ ವಿದ್ಯುತ್ದರ ಏರಿಕೆ ಮಾಡಲಾಗಿತ್ತು. ಆದರೆ ಈಗ, ದಾಖಲೆ ಮಟ್ಟದಲ್ಲಿ ಬೇಡಿಕೆ ಇಟ್ಟಿರುವುದರಿಂದ ಬೇಸಿಗೆಯಲ್ಲಿ ಕರೆಂಟ್ ದರ ಏರಿಕೆಯಾಗುವುದು ಪಕ್ಕಾ ಆಗಿದೆ.
ಕಳೆದ ಬಾರಿ ಎಷ್ಟು ಹೆಚ್ಚಳ ಮಾಡಲಾಗಿತ್ತು?
ನಗರದ ಗೃಹಬಳಕೆ ಗ್ರಾಹಕರಿಗೆ ಮೊದಲ 30 ಯೂನಿಟ್ಗೆ 30 ಪೈಸೆ , 31ರಿಂದ 100 ಯೂನಿಟ್ಗೆ 40 ಪೈಸೆ ಹೆಚ್ಚಿಸಲಾಗಿತ್ತು. 100 ಯೂನಿಟ್ಗೆ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ ತಲಾ 50 ಪೈಸೆ ಏರಿಸಲಾಗಿತ್ತು. ಗ್ರಾಮೀಣ ಗೃಹಬಳಕೆದಾರರಿಗೂ ಇಷ್ಟೇ ದರ ಹೆಚ್ಚಳವಾಗಿತ್ತು. ಎಲ್ಲ ಗ್ರಾಹಕರನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 48 ಪೈಸೆಯಷ್ಟು ಏರಿಕೆ ಮಾಡಿದಂತಾಗಿತ್ತು. ಇದು ಕಳೆದ ಒಂದು ದಶಕದಲ್ಲಾದ ಅತ್ಯಧಿಕ ಪ್ರಮಾಣದ ದರ ಏರಿಕೆಯಾಗಿತ್ತು. ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ಪ್ರತಿ ಯೂನಿಟ್ಗೆ 1.02 ರೂ. ಹೆಚ್ಚಳಕ್ಕೆ ಅನುಮೋದನೆ ನೀಡುವಂತೆ ಪ್ರಸ್ತಾವ ಸಲ್ಲಿಸಿತ್ತು.
ಪರಿಹಾರ ಚೆಕ್: ರಾಜ್ಯ ಒಲಂಪಿಕ್ಸ್ ಕ್ರೀಡಾಕೂಟದ ವೇಳೆಯೇ ಸಾವನ್ನಪ್ಪಿದ್ದ ಸಂತೋಷ್ ಡಿ ಹೊಸಮನಿಗೆ ಕರ್ನಾಟಕ ವಿದ್ಯುತ್ ಕಾರ್ಖಾನೆ ವತಿಯಿಂದ 1 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ವಿತರಿಸಲಾಯ್ತು. ಸಂತೋಷ್ ತಂದೆ ದೇವಣ್ಣ ಆರ್ ಹೊಸಮನಿ ಚೆಕ್ ಸ್ವೀಕರಿಸಿದ್ರು.