ಕೊಪ್ಪಳ: ಇಪ್ಪತ್ತು ವರ್ಷಗಳ ಹಿಂದೆ ಮೃತಪಟ್ಟ ಯುವಕನ ಮೇಲೆ ಗಂಗಾವತಿ ನಗರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.
ಗಂಗಾವತಿ ತಾಲೂಕಿನ ಹಿರೇಜಂತಕಲ್ ಗ್ರಾಮದ ನಿವಾಸಿ ಮಲ್ಲಿಕಾರ್ಜುನ್ 1998 ರಲ್ಲಿ ಮೃತಪಟ್ಟಿದ್ರು. ಆದರೆ ಈಗ ಅವರ ಮೇಲೆ ಗಂಗಾವತಿ ನಗರ ಠಾಣೆ ಪೊಲೀಸರು ಮೂರು ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
2016 ರಲ್ಲಿ ಗಂಗಾವತಿಯಲ್ಲಿ ಕೋಮು ಗಲಭೆಯಾದ ಸಂದರ್ಭ ಪೊಲೀಸರು 92 ಜನರ ವಿರುದ್ಧ ದೂರು ದಾಖಲಿಸಿದ್ರು. ದೂರು ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸೋ ವೇಳೆ ಮೃತನ ಹೆಸರನ್ನು ಪರಿಶೀಲಿಸದೇ ಎಡವಟ್ಟು ಮಾಡಿದ್ದಾರೆ.
ಗಂಗಾವತಿ ನಗರ ಠಾಣೆಯ ಪಿ.ಐ ಆಗಿದ್ದ ಭೀಮನಗೌಡ ಬೀರಾದಾರ್ ಮೃತನ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದು ಬೆಳಕಿಗೆ ಬಂದಿದೆ. ಕೋಮು ಗಲಭೆ ಸಮಯದಲ್ಲಿ ಪೊಲೀಸರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಸಿಕ್ಕ ಸಿಕ್ಕವರ ಮೇಲೆ ಕೇಸ್ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಇದೀಗ ಅದು ಸಾಬೀತಾಗಿದ್ದು ಮೃತನನ್ನು ಪೊಲೀಸರು ಆರೋಪಿಯಾಗಿ ಮಾಡಿದ್ದು ಇದೀಗ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಮಲ್ಲಿಕಾರ್ಜುನ್ ಪರ ವಕೀಲರು ಮರಣ ಪತ್ರವನ್ನು ನ್ಯಾಯಲಯಕ್ಕೆ ನೀಡಿ ಕಾನೂನು ಹೋರಾಟ ಮಾಡುತ್ತಿದ್ದಾರೆ.