ಬೆಂಗಳೂರು: ಕೆಂಪು ದೀಪ ಹೋದ್ರೂ ವಿವಿಐಪಿಗಳ ಸಂಸ್ಕೃತಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ ಎಂಬುದು ಸ್ಪಷ್ಟವಾಗಿದೆ. ಪೊಲೀಸರು ಸಿಎಂಗಾಗಿ ರೋಗಿಯಿದ್ದ ಆಂಬುಲೆನ್ಸ್ ತಡೆ ಹಿಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಂಗಳವಾರ ಸಂಜೆ ಬೆಂಗಳೂರಿನ ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದ ಎದುರು ಈ ಘಟನೆ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಬರುವಿಕೆಗಾಗಿ ಪೊಲೀಸರು ವಾಹನಗಳನ್ನ ತಡೆ ಹಿಡಿದಿದ್ದರು. ಈ ವೇಳೆ ರೋಗಿ ಇದ್ದ ಆಂಬುಲೆನ್ಸ್ ಕೂಡ ವಾಹನಗಳ ಮಧ್ಯೆ ಸಿಲುಕಿತ್ತು. ಸುಮಾರು 10 ನಿಮಿಷ ಆಂಬುಲೆನ್ಸ್ ರಸ್ತೆಯಲ್ಲಿಯೇ ನಿಂತಿತ್ತು.
ವಿವಿಐಪಿ ಸಂಪ್ರದಾಯಕ್ಕೆ ಬ್ರೇಕ್ ಹಾಕುವ ಸಲುವಾಗಿ ಗಣ್ಯ ವ್ಯಕ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ವಾಹನಗಳ ಮೇಲೆ ಕೆಂಪು ದೀಪ ಬಳಕೆಯನ್ನ ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಆಂಬುಲೆನ್ಸ್ ಹಾಗೂ ಅಗ್ನಿಶಮಕ ವಾಹನಗಳಂತಹ ತುರ್ತು ಸೇವೆ ಒದಗಿಸುವಂತಹ ವಾಹನಗಳು ಮಾತ್ರ ಕೆಂಪು ದೀಪ ಬಳಸಬಹುದು ಎಂದು ಹೇಳಿದೆ.