ಮಂಗಳೂರು: ಹತ್ಯೆಯಾದ ಭಜರಂಗದಳ ಕಾರ್ಯಕರ್ತ ದೀಪಕ್ ರಾವ್ ಶವವನ್ನು ಪೊಲೀಸರು ಸದ್ದಿಲ್ಲದೇ ಆಸ್ಪತ್ರೆಯಿಂದ ಸಾಗಿಸಿದ್ದು ಕುಟುಂಬಸ್ಥರು ಹಾಗೂ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಕುಟುಂಬ ಸದಸ್ಯರಿಗೂ ಸಣ್ಣ ಮಾಹಿತಿ ನೀಡದೇ ದೀಪಕ್ ಶವವನ್ನು ಸಾಗಿಸಲಾಗಿದೆ. ಸುರತ್ಕಲ್ನಲ್ಲಿರುವ ದೀಪಕ್ ಮನೆಗೆ ಸದ್ದಿಲ್ಲದೇ ಮೃತದೇಹ ರವಾನೆ ಆಗಿದೆ. ಆಂಬುಲೆನ್ಸ್ ನಲ್ಲಿ ರೋಗಿಯನ್ನು ಸಾಗಿಸುವಂತೆ ದೀಪಕ್ ಶವವನ್ನು ಪೊಲೀಸರು ಸಾಗಿಸಿದ್ದು, ಗಣೇಶಕಟ್ಟೆಯಲ್ಲಿ ದೀಪಕ್ ರಾವ್ ಅಂತಿಮ ದರ್ಶನಕ್ಕೆ ಅವಕಾಶ ಮಾಡಲು ಮುಂದಾಗಿದ್ದರು.
ಆದ್ರೆ ಪೊಲೀಸರ ಸೈಲೆಂಟ್ ಆಪರೇಷನ್ಗೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ದೀಪಕ್ ರಾವ್ ನಿವಾಸದ ಬಳಿ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದ ಕುಟುಂಬಸ್ಥರು ಹಾಗೂ ಸ್ಥಳೀಯರು ಶವ ವಾಪಾಸ್ ಕೊಂಡೊಯ್ಯಲು ಒತ್ತಾಯಿಸಿದ್ದು, ಆಂಬುಲೆನ್ಸ್ ನಿಂದ ಶವ ಇಳಿಸದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವರು ಮಂಗಳೂರಿಗೆ ಬರಬೇಕು. ರಾಮಲಿಂಗಾ ರೆಡ್ಡಿ ಬರದೆ ಶವ ಇಳಿಸಲ್ಲ ಎಂದು 50 ಲಕ್ಷ ರುಪಾಯಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಎಡಿಜಿಪಿ ಕಮಲ್ ಪಂತ್ ಹಾಗೂ ಹಿಂದೂ ನಾಯಕರಾದ ಸತ್ಯಜಿತ್ ಸುರತ್ಕಲ್ ಮತ್ತು ಶರಣ್ ಜೊತೆ ಮಾತುಕತೆ ವಿಫಲವಾಗಿದ್ದು, ಸ್ಥಳದಿಂದ ಕಮಲ್ ಪಂತ್ ಹೊರನಡೆದಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿ ಕಾರ್ ಚೇಸಿಂಗ್- ಬಜರಂಗದಳ ಕಾರ್ಯಕರ್ತ ದೀಪಕ್ ಹತ್ಯೆಗೈದ ಶಂಕಿತರು ವಶಕ್ಕೆ
ಉದ್ಧೇಶಿತ ಶವ ಯಾತ್ರೆಗೆ ಬ್ರೇಕ್ ಹಾಕೋ ಸಲುವಾಗಿ ಪೊಲೀಸರು ಶವ ಸಾಗಿಸಿದ್ರಾ? ಹಿಂಸಾಚಾರ ನಡೆಯಬಹುದು ಅನ್ನೋ ಕಾರಣಕ್ಕೆ ಪೊಲೀಸರು ಹೀಗೆ ಮಾಡಿರಬಹುದಾ? ಎಂಬ ಪ್ರಶ್ನೆ ಮೂಡಿದೆ. ಪೊಲೀಸ್ ನಿರ್ಬಂಧದ ನಡುವೆಯೂ ಬೆಳಗ್ಗೆ 10 ಗಂಟೆಗೆ ದೀಪಕ್ ಶವಯಾತ್ರೆ ನಡೆಸಲು ಹಿಂದೂ ಸಂಘಟನೆಗಳು ಉದ್ದೇಶಿಸಿದ್ದವು. ಇದನ್ನೂ ಓದಿ: ದೀಪಕ್ ಬರ್ಬರ ಹತ್ಯೆಗೈದ ನಾಲ್ವರು ಅರೆಸ್ಟ್: ಪೊಲೀಸರ ಮೇಲೆ ತಲ್ವಾರ್ ಬೀಸಿದ್ದ ಆರೋಪಿಗಳು