ಬಳ್ಳಾರಿ: ಮಾಜಿ ಸಚಿವ, ಮಾಜಿ ಶಾಸಕ ಆನಂದಸಿಂಗ್ ಬೆಂಬಲಿಗರು ರಕ್ಷಣೆ ಕೊಡುವ ಆರಕ್ಷಕರನ್ನೇ ಎಳೆದಾಡಿ ಹಲ್ಲೆ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಮಲ್ಲಿಕಾರ್ಜುನ ಎಂಬವರ ಮೇಲೆ ಆನಂದಸಿಂಗ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಹೊಸಪೇಟೆಯ ಪಾಡುರಂಗ ಕಾಲೋನಿಯಲ್ಲಿ ಕಳೆದ ರಾತ್ರಿ ಕುಲ್ಲಕ ವಿಚಾರಕ್ಕೆ ಕೆಲವರು ಜಗಳ ಮಾಡುತ್ತಿದ್ದರು. ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಗ್ರಾಮೀಣ ಪೊಲೀಸರು ಜಗಳ ಬಿಡಿಸಲು ಹೋದಾಗ ಅವರು ಪೊಲೀಸರನ್ನೇ ಎಳೆದಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜಗಳ ತಡೆಯಲು ಮುಂದಾದ ಪೊಲೀಸ್ ಪೇದೆಯ ವಾಕಿ ಟಾಕಿ ಕಿತ್ತೆಸೆದು ಬಟ್ಟೆಯನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಹೆಸರು ಸಿದ್ದರಾಮಯ್ಯ, ಕೆಲಸ ಮಾಡೋದು ಭೂಮಿ ಮೇಲೆ- ಕುಡಿದ ಮತ್ತಲ್ಲಿ ಪೊಲೀಸರಿಗೆ ಅವಾಜ್
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇದೆ ದೂರು ದಾಖಲು ಮಾಡುತ್ತಿದ್ದಂತೆಯೇ ವೀರೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ದೇವೇಂದ್ರ ಪೂಜಾರ, ಸೋಮೇಶ ಹಾಗೂ ಹನುಮಂತ ಪರಾರಿಯಾಗಿದ್ದು, ಮೂವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.