ನವದೆಹಲಿ: ಸಂಸತ್ತಿನ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಇದ್ದರೆ 2019ರ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಪ್ರಧಾನಿ ಮೋದಿ ಬಿಜೆಪಿ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಮೋದಿ, ನೀವು ನಾನು ಏನಲ್ಲ. ನಮಗೆ ಪಕ್ಷವೇ ಮುಖ್ಯ. ನೀವು ನಿಮ್ಮ ಇಷ್ಟದಂತೆ ನಡೆದುಕೊಂಡರೆ 2019ಕ್ಕೆ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಪ್ರಧಾನಿ ಸೂಚಿಸಿದ್ದಾರೆ ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ನಮಗೆ ಪಕ್ಷಕ್ಕಿಂತದ ದೊಡ್ಡದು ಯಾವುದು ಅಲ್ಲ. ಹೀಗಾಗಿ ಎಲ್ಲ ಸದಸ್ಯರು ಸಂಸತ್ತಿಗೆ ಹಾಜರಾಗಬೇಕು. ಅಮಿತ್ ಷಾ ಈಗ ರಾಜ್ಯಸಭೆಗೆ ಆಯ್ಕೆ ಆಗಿದ್ದು ಎಲ್ಲರನ್ನೂ ಗಮನಿಸಿದ್ದಾರೆ ಎಂದು ಮೋದಿ ಈ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಎಚ್ಚರಿಕೆ ನೀಡಿದ್ದು ಯಾಕೆ?
ಹಿಂದುಳಿದ ವರ್ಗಗಳ ತಿದ್ದುಪಡಿ ಮಸೂದೆ ಅಂಗೀಕಾರ ವೇಳೆ ರಾಜ್ಯಸಭೆಯಲ್ಲಿ ಸರ್ಕಾರ ಮುಜುಗರಕ್ಕೆ ಒಳಗಾಗಿತ್ತು. ಮಸೂದೆ ಅಂಗೀಕಾರ ವೇಳೆ ವಿರೋಧ ಪಕ್ಷದ 74 ಸದಸ್ಯರ ಪೈಕಿ 52 ಮತಗಳು ಲಭಿಸಿತ್ತು. 88 ಸದಸ್ಯ ಬಲದ ಆಡಳಿತಾರೂಢ ಬಿಜೆಪಿಯ 56 ಮಂದಿ ಮಾತ್ರ ಹಾಜರಿದ್ದರು. ಇದರಿಂದ ಸರ್ಕಾರ ಮುಜುಗರ ಅನುಭವಿಸಿತ್ತು. ಈ ಕಾರಣಕ್ಕೆ ಮೋದಿ ಈಗ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಮೋದಿ ಪ್ರಧಾನಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದ ದ್ವಾರಕಾನಾಥ ಗುರೂಜಿ 2019ರ ಬಗ್ಗೆ ಹೇಳಿದ್ದು ಹೀಗೆ