ವಿಜಯಪುರ: ಪ್ರಧಾನಿ ನರೇಂದ್ರ ಮೋದಿಯವರು ಸೂರಿಲ್ಲದೇ ಗೋಳಾಡುತ್ತಿದ್ದ ಜಿಲ್ಲೆಯ ಅಂಧರೊಬ್ಬರಿಗೆ ಸೂರು ಕಲ್ಪಿಸಿಕೊಡೋ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ.
ಇಂಡಿ ತಾಲೂಕಿನ ಇಂಚಗೇರಿ ಗ್ರಾಮದ ಅಂಧ ಕಾಶಿನಾಥ್ ಸೂರಿಲ್ಲದೆ 20 ವರ್ಷಗಳಿಂದ ಗೋಳಾಡುತ್ತಿದ್ದರು. ಸೂರಿಗಾಗಿ ಅನೇಕ ಬಾರಿ ಕಾಶಿನಾಥ್ ಇಂಚಗೇರಿ ಗ್ರಾಮದ ಪಂಚಾಯ್ತಿ ಮೊರೆ ಹೋಗಿದ್ದರು. ಆದರೆ ಅದಕ್ಕೆ ಕ್ಯಾರೆ ಅನ್ನದ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಳು ಅಸಡ್ಡೆ ತೋರಿದ್ದಾರೆ.
ಇದರಿಂದ ನೊಂದಿದ್ದ ಕಾಶಿನಾಥ್ ಗೆ ಇಂಚಗೇರಿಯ ಯುವಕರು ಸಮಾಧಾನ ಹೇಳಿ ಬಳಿಕ ಅವರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಸ್ಪಂದಿಸಿದ ಪ್ರಧಾನಿಯವರು ಕೂಡಲೇ ಕಾಶಿನಾಥ್ ಗೆ ಸೂರು ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಈ ಹಿಂದೆ ಸೂರು ಕಲ್ಪಿಸಲು ಸತಾಯಿಸಿದ್ದಾರೋ ಅವರೇ ಬಂದು ಪರಿಶೀಲಿಸಿ ಕಾಶಿನಾಥ್ ಗೆ 1 ಲಕ್ಷದ 50 ಸಾವಿರು ರೂ. ನಲ್ಲಿ ಸೂರು ಕಟ್ಟಿಕೊಟ್ಟಿದ್ದಾರೆ. ಈ ರೀತಿ ಅಂಧ ಕಾಶಿನಾಥ್ ನ ಬಾಳಿಗೆ ಮೋದಿ ಅವರು ಬೆಳಕಾಗಿದ್ದಾರೆ. ತನಗೆ ಸಹಾಯ ಮಾಡಿದ ಇಂಚಗೇರಿ ಯುವಕರಿಗೆ ಮತ್ತು ಪ್ರಧಾನಿ ಮೋದಿ ಅವರಿಗೆ ಕಾಶಿನಾಥ್ ಪಬ್ಲಿಕ್ ಟಿವಿ ಮುಖಾಂತರ ಅಭಿನಂದನೆ ಸಲ್ಲಿಸಿದ್ದಾರೆ.