ಬೆಂಗಳೂರು: 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕನೊಬ್ಬ ನಾಪತ್ತೆಯಾಗಿದ್ದು ಆತನನ್ನು ದಯವಿಟ್ಟು ಹುಡುಕಿಕೊಡಿ ಎಂದು ಪೋಷಕರು ಮನವಿ ಮಾಡಿದ್ದಾರೆ.
ಲೋಕೇಶ್ ನಾಪತ್ತೆಯಾಗಿರುವ ಬಾಲಕ. ಏಪ್ರಿಲ್ 5 ರಂದು ನಾಪತ್ತೆಯಾಗಿದ್ದು ಆತನ ಪೋಷಕರು ಅಂದಿನಿಂದ ಹುಡುಕಾಡುತ್ತಿದ್ದಾರೆ. ಚನ್ನಪ್ಪ ಬಿಲ್ಡಿಂಗ್, ಶೀಗೇಹಳ್ಲಿಯಲ್ಲಿ ವಾಸವಾಗಿರುವ ಬಾಲಕನ ತಂದೆ ಡಿ.ಬಿ.ನಾಗರಾಜ ನಗರದ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ದೂರಿನಲ್ಲಿದೆ?
ಚೈತನ್ಯ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿರುವ ನಾಗರಾಜು ಅವರಿಗೆ ಜನಾರ್ದನ್ (18) ಮತ್ತು ಲೋಕೇಶ್(15) ವರ್ಷದ ಇಬ್ಬರು ಮಕ್ಕಳಿದ್ದಾರೆ. 2ನೇ ಮಗ ಲೋಕೇಶ್ ಕೊಳ್ಳೇಗಾಲ ಡಾನ್ ಬಾಸ್ಕೋ ಸ್ಕೂಲ್ ನಲ್ಲಿ 9 ನೇ ತರಗತಿ ಓದುತ್ತಿದ್ದನು. ಲೋಕೇಶ್ ಇತ್ತೀಚೆಗೆ ವಾರ್ಷಿಕ ಪರೀಕ್ಷೆ ಮುಗಿಸಿ ಮಾರ್ಚ್ 31ರಂದು ಬೆಂಗಳೂರಿನ ಮನೆಗೆ ಬಂದಿದ್ದ.
ಏಪ್ರಿಲ್ 5ರಂದು ಮಧ್ಯಾಹ್ನ 4 ಗಂಟೆಗೆ ಮನೆಯಿಂದ ಹೊರಗಡೆ ಹೋಗಿದ್ದನು. ಆದರೆ ಈತ ತುಂಬಾ ಸಮಯವಾದರೂ ಮನೆಗೆ ಹಿಂದಿರುಗಲಿಲ್ಲ. ಪೋಷಕರು ಆತನ ಸ್ನೇಹಿತರು ಮತ್ತು ಸಂಬಂಧಿಕರೆಲ್ಲರನ್ನು ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೇ ಆತನ ಶಾಲೆಗೂ ಹೋಗಿ ವಿಚಾರಿಸಿದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ. ಇದುವರೆಗೂ ಬಾಲಕ ಪತ್ತೆಯಾಗಿಲ್ಲ. ಹೀಗಾಗಿ ಲೋಕೇಶ್ ಕಾಣೆಯಾಗಿರಬಹುದು ಅಥವಾ ಅಪಹರಣವಾಗಿರಬಹುದು ಎಂದು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಾಲಕನ ಬಗ್ಗೆ ನಿಮಗೆ ಏನಾದರೂ ಮಾಹಿತಿ ತಿಳಿದರೆ ಈ ಫೋನ್ ನಂಬರ್ ಗೆ ಕರೆ ಮಾಡಿ 99009 13545, 98808 53844