ಕೊಪ್ಪಳ: ಬಿಜೆಪಿ 2ನೇಪಟ್ಟಿಯಲ್ಲಿ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ. ಈಗ ಸಂಗಣ್ಣ ಕರಡಿಯವರ ಮಗನಿಗೆ ಬಿ ಫಾರಂ ಕೊಟ್ಟಿದ್ದು, ನನಗೆ ತುಂಬಾ ನೋವಾಗಿದೆ ಎಂದು ಜಿಲ್ಲೆಯ ಘೋಷಿತ ಬಿಜೆಪಿ ಅಭ್ಯರ್ಥಿ ಸಿವಿ ಚಂದ್ರಶೇಖರ್ ಹೇಳಿದ್ದಾರೆ.
ತಮಗೆ ಬಿ ಫಾರಂ ಕೈತಪ್ಪುತ್ತಿರುವುದನ್ನು ಮನಗಂಡು ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ಬೆಂಬಲಿಗರ ಹಾಗೂ ಕಾರ್ಯಕರ್ತರ ಸಭೆ ನಡೆಸಿ ಅವರು ಮಾತನಾಡಿದ್ದಾರೆ. ಸಭೆಯಲ್ಲಿ ಬಹುತೇಕ ಕಾರ್ಯಕರ್ತರು ಸಂಸದ ಸಂಗಣ್ಣ ಕರಡಿ ವಿರುದ್ಧ ಹರಿಹಾಯ್ದಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಸಿವಿ ಚಂದ್ರಶೇಖರ್, ಮೊದಲು ಎರಡನೇ ಪಟ್ಟಿಯಲ್ಲಿ ನನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ ಈಗ ಸಂಗಣ್ಣ ಕರಡಿ ಅವರ ಮಗನಿಗೆ ಬಿ ಫಾರಂ ನೀಡಿದ್ದಾರಂತೆ. ಇದರಿಂದ ನನಗೆ ತುಂಬಾ ನೋವಾಗಿದೆ. ಇನ್ನೂ ಕೂಡಾ ಬಿಜೆಪಿ ವರಿಷ್ಠರ ಮೇಲೆ ನಂಬಿಕೆ ಇದೆ. ನಾಳೆ ಬೆಳಗ್ಗಿನವರೆಗೂ ಕಾಯುತ್ತೇನೆ. ಯಡಿಯೂರಪ್ಪ ಅವರೇ ದಯವಿಟ್ಟು ನನಗೆ ಮೋಸ ಮಾಡಬೇಡಿ. ನಾನು ನಿಮ್ಮ ಕಾಲಿಗೆ ಬೇಕಾದರೂ ಬೀಳುತ್ತೇನೆ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ವ್ಯತಿರಿಕ್ತವಾಗಿ ಏನಾದರೂ ಪಕ್ಷದ ವರಿಷ್ಠರು ನಿರ್ಧಾರ ಮಾಡಿದ್ರೆ ನಾನು ಬೆಂಬಲಿಗರ ನಿರ್ಧಾರದಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಾನು ಬಿಜೆಪಿ ವರಿಷ್ಠರ ನಿರ್ಧಾರವನ್ನು ನಾಳೆ ಮಧ್ಯಾಹ್ನ ಒಂದು ಗಂಟೆಯವರೆಗೂ ಕಾಯುತ್ತೇನೆ ಎಂದಿದ್ದಾರೆ.