ಯಾದಗಿರಿ: ಮನೆಯ ಯಜಮಾನ ಮೃತಪಟ್ಟಿದ್ದಾನೆಂದು ಕುಟುಂಬಸ್ಥರೆಲ್ಲರು ರೋದಿಸುತ್ತಾ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದಾಗ ಮನೆಯ ಯಜಮನ ಎದ್ದು ಕುಳಿತ ವಿಚಿತ್ರ ಘಟನೆ ಸೋಮವಾರ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮದಲಿಂಗನಾಳ ಗ್ರಾಮದಲ್ಲಿ ನಡೆದಿದೆ.
ನಿಂಗಪ್ಪ (55) ಎನ್ನುವವರೇ ಎದ್ದು ಕುಳಿತ ವ್ಯಕ್ತಿ. ನಿಂಗಪ್ಪ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ನಿಂಗಪ್ಪ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ರು. ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ತುರ್ತು ಹೃದಯ ಶಸ್ತ್ರ ಚಿಕಿತ್ಸೆ ಮಾಡಬೇಕು ಇಲ್ಲದಿದ್ದರೆ ಬದುಕುವ ಸಾಧ್ಯತೆ ಕಡಿಮೆ ಎಂದಿದ್ದರು.
ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ನಿಂಗಪ್ಪರನ್ನು ಅಂಬುಲೆನ್ಸ್ ಮುಖಾಂತರ ಊರಿಗೆ ತರಲಾಗಿತ್ತು. ಊರಿಗೆ ಬರುವ ಮಾರ್ಗ ಮಧ್ಯೆಯೇ ನಿಂಗಪ್ಪ ಸಾವನ್ನಪ್ಪಿದ್ದಾರೆಂದು ತಿಳಿದ ಕುಟುಂಬಸ್ಥರು ಸಂಬಂಧಿಕರಿಗೆ ಸುದ್ದಿ ತಿಳಿಸಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡಿದ್ರು.
ನಿಂಗಪ್ಪ ಅವರು ಎದ್ದು ಕುಳಿತಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಶೋಕಸಾಗರದಲ್ಲಿ ಮುಳಗಿದ್ದ ಕುಟುಂಬಸ್ಥರ ಮುಖದಲ್ಲಿ ಸಂತೋಷ ಮೂಡಿದೆ. ಈಗ ನಿಂಗಪ್ಪ ಅವರು ಕುಟುಂಬಸ್ಥರೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.