ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಗಗನ ಸಖಿಯೊಬ್ಬರ ಎದೆ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
28 ವರ್ಷದ ಪ್ರೇಮ್ ಕುಮಾರ್ ಬಂಧಿತ ಆರೋಪಿ. ಬಾಣಸವಾಡಿಯ ಮಾರುತಿ ಸೇವಾನಗರದ ನಿವಾಸಿಯಾಗಿರುವ ಈತ ಪೈಂಟರ್ ಕೆಲಸ ಮಾಡುತ್ತಿದ್ದಾನೆ.
ಏನಿದು ಪ್ರಕರಣ?: ಕಳೆದ ಫೆ. 12ರಂದು ರಾತ್ರಿ ನಗರದ ಹೆಚ್ಬಿಆರ್ ಲೇಔಟ್ನ 99 ದೋಸಾ ಹೊಟೇಲ್ನಿಂದ ಊಟ ಮುಗಿಸಿ ಗಗನ ಸಖಿ ತನ್ನ ಗೆಳೆಯ ಅನಿಶ್ ಜೊತೆ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಎರಡು ಬೈಕಿನಲ್ಲಿ ಬಂದ ಹೆಲ್ಮೆಟ್ಧಾರಿ ದುಷ್ಕರ್ಮಿಗಳು ಆಕೆಯ ಎದೆಯ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತನೆ ಮಾಡಿದ್ದರು. ಕೂಡಲೇ ಯುವತಿ ಕಿರುಚಾಡಿದ್ದು, ಗೆಳೆಯನಿದ್ದ ಕಾರಣ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದರು.
ಘಟನೆ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯ ಮೇಲೆ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.