ಬೆಂಗಳೂರು: ತಡ ರಾತ್ರಿ ಅಣ್ಣ-ತಮ್ಮನ ಜಗಳದಲ್ಲಿ ತಮ್ಮ ಅಣ್ಣನನ್ನೇ ಕೊಂದಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಸ್ಕರ್ ರೆಜಾರಿಯಾ(49) ಕೊಲೆಯಾದ ದುರ್ದೈವಿ. ತಮ್ಮ ರಾಯ್ಸನ್ ರೆಜಾರಿಯಾ ಮತ್ತು ಆಸ್ಕರ್ ರೆಜಾರಿಯಾ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಏರಿದಾಗ ರಾಯ್ಸನ್ ಆಸ್ಕರ್ಗೆ ಚಾಕುವಿನಿಂದ ಇರಿದಿದ್ದಾನೆ.
ಆಸ್ಕರ್ ತನ್ನ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದ. ಮನೆಗೆ ಬಂದಾಗ ರಾಯ್ಸನ್ ಮನೆಯಲ್ಲಿ ಇರಲಿಲ್ಲ. ಅದನ್ನು ಪ್ರಶ್ನಿಸಿದ್ದಕ್ಕೆ ರಾಯ್ಸನ್ ಜಗಳ ತೆಗೆದಿದ್ದ. ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಚಾಕುವಿನಿಂದ ತನ್ನ ಅಣ್ಣನನ್ನು ಇರಿದಿದ್ದಾನೆ. ಚಾಕು ಇರಿತದಿಂದ ಆಸ್ಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಸ್ಕರ್ ಕುಟುಂಬ ಮೂಲತಃ ಆಂಧ್ರಪ್ರದೇಶದವರು. ಕಳೆದ 17 ವರ್ಷದಿಂದ ಬಾಣಸವಾಡಿಯ ಕರಿಯಣ್ಣ ಲೇಔಟ್ ನಲ್ಲಿ ವಾಸವಿದ್ದರು. ರಾಯ್ಸನ್ ಪ್ಲಂಬರ್ ಕೆಲಸ ಮಾಡುತ್ತಿದ್ದ. ಸದ್ಯ ಆರೋಪಿ ಆಸ್ಕರ್ನನ್ನು ಬಾಣಸವಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ.