ಕಲಬುರಗಿ: ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ನನ್ನ ಸಾವಿಗೆ ಇವರೇ ಕಾರಣ ಅಂತಾ ಹೇಳಿ ವ್ಯಕ್ತಿಯೊಬ್ಬ ರೈಲಿಗೆ ತಲೆಕೊಟ್ಟಿರುವ ಘಟನೆ ನಗರದ ಪಿಡಿಎ ಕಾಲೇಜು ಬಳಿಯ ಹಳಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
26 ವರ್ಷದ ಸುಧಾಕರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸುಧಾಕರ್ ಜೇವರ್ಗಿ ತಾಲೂಕಿನ ಸುಂಬಡ ಗ್ರಾಮದ ನಿವಾಸಿಯಾಗಿದ್ದು, ಮೂರು ದಿನಗಳ ಹಿಂದೆ ಸುಧಾಕರ್ ಪತ್ನಿ ರೇಖಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಆಸ್ಪತ್ರೆಯಲ್ಲಿ ಪತ್ನಿಯನ್ನು ಭೇಟಿಯಾಗಿ ಮನೆಗೆ ಹಿಂದಿರುಗುವಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಮಲ್ಲಪ್ಪ ಮುರುಳಿ, ಭಾಗವ್ವ ಮುರುಳಿ, ಭೀಮಾಬಾಯ್ ಮತ್ತು ಮಾದೇವಿ ಎಂಬವರೇ ನನ್ನ ಸಾವಿಗೆ ಕಾರಣರಾಗಿದ್ದಾರೆ. ಈ ನಾಲ್ವರಲ್ಲಿ ಮಲ್ಲಪ್ಪ ಎಂಬವರೇ ನನ್ನ ಸಾವಿಗೆ ಕಾರಣವಾದ ಪ್ರಮುಖ ವ್ಯಕ್ತಿ. ಜೈ ಕರ್ನಾಟಕ ರಕ್ಷಣಾ ವೇದಿಕೆಯ ಅಮರನಾಥ್ ಕುಳಗೇರಿ ಮತ್ತು ರಾಜ್ಯಾಧ್ಯಕ್ಷರಾದ ಮಂಜುನಾಥ್ ಹಾಗರಗಿ ಅವರು ನನ್ನ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಅಂತಾ ಸುಧಾಕರ್ ಹೇಳಿದ್ದಾರೆ.
ಸೆಲ್ಫಿ ವಿಡಿಯೋದಲ್ಲಿ ಸುಧಾಕರ್ ಹೇಳಿರುವ ನಾಲ್ವರು ಪತ್ನಿಯ ಸಂಬಂಧಿಕರು ಎಂದು ಹೇಳಲಾಗಿದೆ. ಘಟನೆ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://youtu.be/Nx6Wi9pzLAk