ಕಲಬುರಗಿ: ಇಬ್ಬರು ಮಕ್ಕಳನ್ನು ಬಾವಿಗೆ ಹಾಕಿ ನಂತರ ತಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಹುಡದಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಹುಡದಳ್ಳಿ ಗ್ರಾಮದ ರಂಗಯ್ಯ ತನ್ನ ಇಬ್ಬರು ಮಕ್ಕಳಾದ 5 ವರ್ಷದ ಶಿವಕುಮಾರ್ ಮತ್ತು 2 ವರ್ಷದ ಶ್ರೀಕಾಂತನನ್ನು ಬಾವಿಗೆ ಹಾಕಿ ಸಾಯಿಸಿದ್ದಾನೆ. ನಂತರ ಬಾವಿಯ ಪಕ್ಕದಲ್ಲಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ರಂಗಯ್ಯ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಂಗಯ್ಯ ಕುಡಿತದ ದಾಸನಾಗಿದ್ದು, ಮಾನಸಿಕವಾಗಿ ಅಸ್ವಸ್ಥವಾಗಿದ್ದ. ಇದರಿಂದ ಪ್ರತಿದಿನ ಹೆಂಡತಿ ಜೊತೆ ಜಗಳವಾಡುತ್ತಿದ್ದ. ಅದೇ ರೀತಿ ಬುಧವಾರ ಕೂಡ ಪತ್ನಿ ಜೊತೆ ಜಗಳವಾಡಿಕೊಂಡು ಎರಡು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ. ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಸಂಜೆವರೆಗೂ ರಂಗಯ್ಯ ಹಾಗೂ ಮಕ್ಕಳು ಮನೆಗೆ ಹಿಂದಿರುಗದ ಕಾರಣ ಗ್ರಾಮಸ್ಥರೇ ಹುಡುಕಿಕೊಂಡು ಹೋಗಿದ್ದಾರೆ. ಆಗ ಮಕ್ಕಳು ಬಾವಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಬಳಿಕ ಅಲ್ಲೆ ಪಕ್ಕದಲ್ಲಿದ್ದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ರಂಗಯ್ಯ ಪತ್ತೆಯಾಗಿದ್ದಾನೆ.
ಈ ಕುರಿತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಸುಲೆಪೇಟ್ ಪೊಲೀಸರು ಬಂದು ದೂರು ದಾಖಲಿಸಿಕೊಂಡಿದ್ದಾರೆ.