ಮಂಡ್ಯ: ವ್ಯಕ್ತಿಯೊಬ್ಬರನ್ನ ಬರ್ಬರವಾಗಿ ಕೊಲೆ ಮಾಡಿ ಸೊಂಟದಿಂದ ಕೆಳಗಿನ ದೇಹದ ಭಾಗವನ್ನು ಚೀಲದಲ್ಲಿ ತುಂಬಿ ಹೆದ್ದಾರಿ ಪಕ್ಕದಲ್ಲಿ ಎಸೆದು ಹೋಗಿರುವ ಭೀಕರ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಜಂಕ್ಷನ್ ಬಳಿ ನಡೆದಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲೇ ಪ್ಲಾಸ್ಟಿಕ್ ಚೀಲದಲ್ಲಿ ಅರ್ಧ ದೇಹವನ್ನು ತುಂಬಿ ದುಷ್ಕರ್ಮಿಗಳು ಎಸೆದು ಹೋಗಿದ್ದಾರೆ. ಚೀಲದಿಂದ ಕೇವಲ ಕಾಲುಗಳಷ್ಟೇ ಹೊರಗೆ ಕಾಣುತ್ತಿದ್ದು, ಭಯಭೀತರಾದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದು ಪೊಲೀಸರು ಚೀಲವನ್ನು ಪರಿಶೀಲನೆ ನಡೆಸಿದಾಗ ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿರುವ ಸೊಂಟದಿಂದ ಕೆಳಗಿನ ಕೇವಲ ಅರ್ಧ ದೇಹ ಮಾತ್ರ ಪತ್ತೆಯಾಗಿದೆ.
ಬೆಳ್ಳೂರು ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಉಳಿದ ಅರ್ಧ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ ಕೊಲೆ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.