ಚಿಕ್ಕಬಳ್ಳಾಪುರ: ರಾಜ್ಯಾದ್ಯಾಂತ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವುದು ನಕಲಿ ವೈದ್ಯರಿಗೆ ವರ ಎಂಬಂತಾಗಿದೆ. ಚಿಕಿತ್ಸೆ ನೀಡುವ ಹೆಸರಿನಲ್ಲಿ ದುಡ್ಡು ಮಾಡೋಕೆ ಹೋದ ನಕಲಿ ವೈದ್ಯ ಅಮಾಯಕ ವ್ಯಕ್ತಿಯನ್ನು ಬಲಿ ಪಡೆದಿದ್ದಾನೆ.
ಬಾಗೇಪಲ್ಲಿ ತಾಲೂಕು ಘಂಟವಾರಿಪಲ್ಲಿ ಗ್ರಾಮದ 40 ವರ್ಷದ ನರಸಪ್ಪ ಮೃತ ದುರ್ದೈವಿ. ಕೈಗೆ ಗಾಯವಾದ ಕಾರಣ ಪ್ರಾಥಮಿಕ ಚಿಕಿತ್ಸೆಗೆ ನರಸಪ್ಪ ಪಟ್ಟಣದ ಟಿಬಿ ಕ್ರಾಸ್ ನ ಅಶ್ವಿನಿ ಕ್ಲಿನಿಕ್ ತೆರಳಿದ್ದಾರೆ. ಕ್ಲಿನಿಕ್ನಲ್ಲಿ ಆಂಧ್ರ ಮೂಲದ ಆರ್ಎಂಪಿ ವೈದ್ಯ ಇನಾಯತ್ ಉಲ್ಲಾ ಎಂಬಾತ ಚಿಕಿತ್ಸೆ ನೀಡಿದ್ದಾನೆ. ಚಿಕಿತ್ಸೆ ಪಡೆದ ನಂತರ ನರಸಪ್ಪ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ.
ನರಸಪ್ಪ ಮೃತಪಟ್ಟ ಕೂಡಲೇ ಖುದ್ದು ನಕಲಿ ವೈದ್ಯ ಇನಾಯತ್ ಉಲ್ಲಾ ನರಸಪ್ಪ ರನ್ನು ತಾಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ನಾಟಕವಾಡಿದ್ದಾನೆ. ಆದರೆ ಅಷ್ಟರಲ್ಲಿ ವಿಷಯ ತಿಳಿದ ಮೃತನ ಸಂಬಂಧಿಕರು ಹಾಗೂ ಘಂಟವಾರಿಪಲ್ಲಿ ಗ್ರಾಮಸ್ಥರು ನಕಲಿ ವೈದ್ಯನನ್ನು ತರಾಟೆಗೆ ತೆಗೆದುಕೊಂಡು ಬಾಗೇಪಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಗೇಪಲ್ಲಿ ಪೊಲೀಸರು ಇನಾಯತ್ ಉಲ್ಲಾನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.