ವಿಜಯಪುರ: ಜಮೀನಲ್ಲಿ ಮೊಬೈಲ್ ಟವರ್ ಹಾಕ್ತಿವಿ ಅಂತಾ ಹೇಳಿ ವಂಚಿಸಿದ ಖದೀಮರಿಗೆ ರೈತರು ಚಪ್ಪಲಿಯಿಂದ ಥಳಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಬ್ಬಸಾವಳಗಿ ಗ್ರಾಮದ ರಾಘವೇಂದ್ರ ಕುಲಕರ್ಣಿ ಹಾಗೂ ವಿಜಯಪುರ ನಗರದ ಪಂಮುಸಿಂಗ್ ಪವಾರ ಎಂಬ ಖದೀಮರು ಜಮೀನುಗಳಲ್ಲಿ ಮೊಬೈಲ್ ಟಾವರ್ ಹಾಕಿಸುತ್ತೇವೆ ಅಂತಾ ಬುರಡೆ ಬಿಟ್ಟು ಕೋಟಿ ಕೋಟಿ ರೂ. ಹಣ ಲೂಟಿ ಹೊಡೆದು ಪರಾರಿಯಾಗಿದ್ದರು ಎನ್ನಲಾಗಿದೆ.
ಜಮೀನುಗಳಲ್ಲಿ ಫ್ರೀಯಾಗಿ ಮೊಬೈಲ್ ಟವರ್ ಹಾಕಿಸಿಕೊಟ್ಟು ಕಂಪನಿಯಿಂದ ಪ್ರತಿ ತಿಂಗಳು 1 ಲಕ್ಷ ರೂ. ಬಾಡಿಗೆ ಕೊಡಿಸುತ್ತೇವೆ. ಇದಕ್ಕೆ ನಮಗೆ ಕಮಿಷನ್ ಅಂತಾ ಪ್ರತಿ ಟವರ್ಗೆ 50 ಸಾವಿರ ದಿಂದ ಒಂದು ಲಕ್ಷ ರೂ. ನೀಡಬೇಕೆಂದು ಹೇಳಿ ಸುಮಾರು 60ಕ್ಕಿಂತ ಹೆಚ್ಚು ರೈತರನ್ನು ವಂಚಿಸಿ ಕೋಟಿ ಕೋಟಿ ಹಣ ಲೂಟಿ ಹೊಡೆದು ಪರಾರಿಯಾಗಿದ್ದರಂತೆ.
ಖದೀಮರು ಭಾನುವಾರದಂದು ಬಾರ್ವೊಂದರಲ್ಲಿ ಸಿಕ್ಕಿದ್ದಾರೆ. ಆಗ ಮನೆಗೆ ಕರೆತಂದ ರೈತರು ಖದೀಮರಿಗೆ ಚಪ್ಪಲಿಯಿಂದ ಹೊಡೆದು ತಮ್ಮ ಹಣ ವಾಪಸ್ ನೀಡುವಂತೆ ಒತ್ತಾಯಿಸಿ ಸಿಂಧಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.