ಬೆಂಗಳೂರು: ಸರ್ಕಾರ ರಾಜ್ಯದ ಪ್ರತಿ ಬಡ ಜನರಿಗೆ ಅನ್ನ ಸಿಗಲಿ ಅನ್ನೂ ಉದ್ದೇಶದಿಂದ ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆಯನ್ನ ಜಾರಿಗೆ ತಂದಿದೆ. ಆದ್ರೆ ಅದೇ ಅನ್ನ ಭಾಗ್ಯವನ್ನ ಬಂಡವಾಳ ಮಾಡಿಕೊಂಡಿರೋ ಕೆಲವರು ಬಡ ಜನರಿಗೆ ಸೇರಬೇಕಾದ ಅಕ್ಕಿಗೆ ಕನ್ನ ಹಾಕಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಳ್ಳಿ ಜನರಿಗೆ ತಲುಪಬೇಕಾದ ಅಕ್ಕಿಯ ತೂಕದಲ್ಲಿ ಗೋಲ್ ಮಾಲ್ ಮಾಡಿದ್ದಾರೆ ಎಂದು ಆರೋಪಿಸಿ ಜನರು ನ್ಯಾಯಬೆಲೆ ಅಂಗಡಿ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರ ಪ್ರತಿ ತಿಂಗಳು ಗ್ರಾಮೀಣ ಭಾಗದ ಜನರಿಗೆ ಪಡಿತರ ತಲುಪಲಿ ಅನ್ನೂ ಉದ್ದೇಶದಿಂದ ನಾಲ್ಕೈದು ಹಳ್ಳಿಗಳಿಗೆ ಒಂದೂಂದು ನ್ಯಾಯಬೆಲೆ ಅಂಗಡಿಗಳನ್ನ ತೆರೆದಿದ್ದು, ಈ ಮುಖಾಂತರ ರೈತರಿಗೆ ಪಡಿತರ ಧಾನ್ಯವನ್ನ ತಲುಪಿಸುತ್ತಿದೆ. ಆದ್ರೆ ಕೆಲವರು ಸರ್ಕಾರದ ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕಿದ್ದು, ಹಳೆ ತಕಡಿಗಳಲ್ಲಿ ತೂಕ ಹಾಕುವ ಮುಖಾಂತರ ಒಂದು ಕೂಪನ್ ಮೇಲೆ, ಒಮ್ಮೆಲೆ ಎರಡರಿಂದ ಮೂರು ಕೆಜಿ ಅಕ್ಕಿಯನ್ನ ಗೋಲ್ ಮಾಲ್ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹೀಗಾಗಿ ಹಲವು ತಿಂಗಳುಗಳಿಂದ ತೂಕದ ಮೇಲೆ ಅನುಮಾನಗೊಂಡಿದ್ದ ಸಾರ್ವಜನಿಕರು ಶನಿವಾರ ಸೊಸೈಟಿ ಬಳಿ ಎಲೆಕ್ಟ್ರಾನಿಕ್ ಸ್ಕೇಲ್ ತಂದು ರಿಯಾಲಿಟಿ ಚೆಕ್ ನಡೆಸಿದ್ದಾರೆ. ಈ ಮುಖಾಂತರ ಅನ್ನಭಾಗ್ಯ ಅಕ್ಕಿಯಲ್ಲಿ ಸೊಸೈಟಿ ಸಿಬ್ಬಂದಿ ನಡೆಸುತ್ತಿದ್ದ ಗೋಲ್ ಮಾಲ್ ಬೆಳಕಿಗೆ ತಂದಿದ್ದಾರೆ.