ಬೆಂಗಳೂರು: ಜೈಲಿನಲ್ಲಿರುವ ಶಶಿಕಲಾಗೆ ಈಗ ಮತ್ತೊಂದು ಶಾಕ್ ಸಿಕ್ಕಿದೆ. ಶಶಿಕಲಾ ಬಂಟ ಪಳನಿಸ್ವಾಮಿ ಜೊತೆಗಿನ ಭೇಟಿ ರದ್ದಾಗಿದೆ.
ಪರಪ್ಪನ ಅಗ್ರಹಾರದಲ್ಲಿ ಇರುವ ಚಿನ್ನಮ್ಮ ಭೇಟಿ ಮಾಡಲು ಇಂದು ಪಳನಿಸ್ವಾಮಿ ಬರಬೇಕಿತ್ತು. ಆದ್ರೆ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರೋರನ್ನು ಭೇಟಿಯಾಗೋದು ಸೂಕ್ತ ಅಲ್ಲ ಎಂಬ ಕಾನೂನು ಸಲಹೆಯ ಹಿನ್ನೆಲೆಯಲ್ಲಿ ಬಹುಮತ ಸಾಬೀತು ಬಳಿಕ ಶಶಿಕಲಾ ಭೇಟಿಗೆ ಪಳನಿಸ್ವಾಮಿ ಚಿಂತನೆ ನಡೆಸಿದ್ದಾರೆ. ಜೈಲಿನಲ್ಲಿ ಭೇಟಿಯಾದ್ರೆ ಅಪರಾಧಿ ಭೇಟಿ ಮಾಡಿದ ಸಿಎಂ ಎಂದು ಪನ್ನೀರ್ ಸೆಲ್ವಂ ಕಾನೂನು ಹೋರಾಟ ಮಾಡ್ತಾರೆ ಅನ್ನೋ ಭಯಕ್ಕೆ ಭೇಟಿ ರದ್ದಾಗಿದೆ ಎಂದು ಹೇಳಲಾಗಿದೆ.
ಶನಿವಾರ ಬೆಳಗ್ಗೆ ಬಹುಮತ ಸಾಬೀತು ಮಾಡಿ, ಸಂಪುಟ ಸಭೆ ಮುಗಿಸಿದ ಬಳಿಕ ಪಳನಿಸ್ವಾಮಿ ಶಶಿಕಲಾರನ್ನ ಭೇಟಿ ಮಾಡಲಿದ್ದಾರೆ. ಅಲ್ಲದೆ ಭಾನುವಾರ ಕೈದಿಗಳನ್ನು ಭೇಟಿ ಮಾಡಲು ಅವಕಾಶ ಇಲ್ಲವಾದ್ದರಿಂದ ವಿಶೇಷ ಅನುಮತಿ ನೀಡಿದ್ರೆ ಮಾತ್ರ ಭಾನುವಾರ ಶಶಿಕಲಾರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಸೋಮವಾರವೇ ಪಳನಿಸ್ವಾಮಿ ಶಶಿಕಲಾ ಭೇಟಿಯಾಗಬೇಕಿದೆ.