ಕಲಬುರಗಿ: ಮನೆ ಖಾಲಿ ಮಾಡಿಲ್ಲ ಎಂಬ ಕಾರಣಕ್ಕೆ ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
25 ವರ್ಷದ ಶಿವಕುಮಾರ್ ಕೊಲೆಯಾದ ಯುವಕ. ಭಾನುವಾರ ರಾತ್ರಿ ಗಣೇಶ ನಗರದ ಬಳಿ ಶಿವಕುಮಾರ್ ತನ್ನ ಸ್ನೇಹಿತ ಪ್ರಭಾಕರ್ ಎಂಬವರ ಜೊತೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಇಬ್ಬರನ್ನು ಅಡ್ಡಗಟ್ಟಿದ ಮನೆಯ ಮಾಲೀಕ ಅವಿನಾಶ್, ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದಾಗಿ ಶಿವಕುಮಾರ್ ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರಭಾಕರ್ ನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮನೆಯ ಮಾಲೀಕ ಅವಿನಾಶ್ ಕಳೆದ ಎರಡು ತಿಂಗಳಿನಿಂದ ಮನೆ ಖಾಲಿ ಮಾಡುವಂತೆ ಶಿವಕುಮಾರ್ ಗೆ ಹೇಳುತ್ತಾ ಬಂದಿದ್ದನು. ಆದ್ರೆ ಶಿವಕುಮಾರ್ ಮಾತ್ರ ಮನೆ ಖಾಲಿ ಮಾಡಿರಲಿಲ್ಲ. ಇದ್ರಿಂದ ಕೋಪಗೊಂಡ ಅವಿನಾಶ್ ಕೊಲೆ ಮಾಡಿದ್ದಾನೆ ಎಂಬ ಮಾಹಿತಿಗಳು ಲಭಿಸಿವೆ.
ಘಟನೆ ಬಳಿಕ ಆರೋಪಿ ಅವಿನಾಶ್ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಎಂಬಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಅವಿನಾಶ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.