ಚೆನ್ನೈ: ಮಾಜಿ ಸಿಎಂ ಜಯಲಲಿತಾ 69ನೇ ಜನ್ಮದಿನದಂದೇ ತಮಿಳುನಾಡು ರಾಜಕೀಯದಲ್ಲಿ ಹೊಸ ರಾಜಕೀಯ ಪಕ್ಷವೊಂದು ಶುರುವಾಗಿದೆ. ಜಯಲಲಿತಾ ಅಣ್ಣನ ಮಗಳಾದ ದೀಪಾ ಜಯಕುಮಾರ್ `ಎಂಜಿಆರ್ ಅಮ್ಮಾ ದೀಪಾ ಫೋರಂ’ ಅಂತ ಹೆಸರಿಟ್ಟಿದ್ದಾರೆ.
ಎಂಜಿಆರ್ ಮತ್ತು ಜಯಲಲಿತಾ ಗದೆ ಹಿಡಿದಿರೋದು ಪಕ್ಷದ ಚಿಹ್ನೆಯಾಗಿದೆ. ಜಯಾ ಕ್ಷೇತ್ರ ರಾಧಾಕೃಷ್ಣ ನಗರದಿಂದ(ಆರ್ಕೆ ನಗರ) ಸ್ಪರ್ಧಿಸೋದಾಗಿ ದೀಪಾ ಹೇಳಿದ್ದು, ಜನರ ಬೆಂಬಲ ಕೇಳಿದ್ದಾರೆ.
ಶಶಿಕಲಾ ವಿರುದ್ಧವಾಗಿರುವ ತಂಡದ ಜೊತೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಈಗ ಇರುವ ಸರ್ಕಾರವನ್ನು ಕಿತ್ತುಹಾಕುವುದು ನಮ್ಮ ಉದ್ದೇಶ. ಮುಂದಿನ ಸ್ಥಳಿಯ ಚುನಾವಣೆಯಲ್ಲಿ ನಮ್ಮ ಪಕ್ಷದ ಅಬ್ಯರ್ಥಿಗಳು ಕಣಕ್ಕೆ ಇಳಿಯಲಿದ್ದು, ಯುವ ಜನಾಂಗ ನಮಗೆ ಸಹಕಾರ ನೀಡಬೇಕೆಂದು ದೀಪಾ ಕೇಳಿಕೊಂಡಿದ್ದಾರೆ.
ಶಶಿಕಲಾಗೆ ಬೆಂಬಲ ನೀಡಿದ್ದ ದೀಪಾ ಸಹೋದರ ದೀಪಕ್ ಈಗ ಉಲ್ಟಾ ಹೊಡೆದಿದ್ದಾರೆ. ಪೋಯಸ್ ಗಾರ್ಡನ್ನ ಬಂಗಲೆ, ಇತರೆ ಆಸ್ತಿಗಳು ತನಗೆ ಹಾಗೂ ತನ್ನ ಸಹೋದರಿ ದೀಪಾಗೆ ಸೇರಿದ್ದು ಅಂದಿದ್ದಾರೆ.
ನಮ್ಮ ಅತ್ತೆ ಜಯಲಲಿತಾಗಾಗಿ 100 ಕೋಟಿ ದಂಡ ಕಟ್ಟುತ್ತೇನೆ. ಆದ್ರೆ ನನ್ನ ಹತ್ರ ದುಡ್ಡಿಲ್ಲ. ಹೀಗಾಗಿ ಅತ್ತೆಯ ಆಸ್ತಿ ಮಾರಾಟ ಮಾಡ್ತೀನಿ ಅಂತಿದ್ದಾರೆ. ಇದೇ ವೇಳೆ, ಟಿಟಿವಿ ದಿನಕರನ್ ಅಧಿಕಾರ ವಹಿಸಿಕೊಂಡಿರೊದನ್ನು ಖಂಡಿಸಿದ್ದು, ಇದೆಲ್ಲಾ ಹೇಗಾಯ್ತೋ ಗೊತ್ತಾಗ್ತಿಲ್ಲ. ಬಹುಶಃ ಶಶಿಕಲಾರನ್ನು ಬೆದರಿಸಿ ಟಿಟಿವಿ ದಿನಕರನ್ ಪಕ್ಷದ ಗದ್ದುಗೆ ಏರಿರಬಹುದು. ಆದ್ರೆ ನಾವಿದನ್ನು ಒಪ್ಪಲ್ಲ ಎಂದಿದ್ದಾರೆ. ಪನ್ನೀರ್ ಸೆಲ್ವಂ ಒಳ್ಳೆ ಆಡಳಿತಗಾರ ಎಂದಿರುವ ದೀಪಕ್, ತನಗೆ ರಾಜಕೀಯಕ್ಕೆ ಬರೋ ಆಸಕ್ತಿ ಇಲ್ಲ ಎಂದಿದ್ದಾರೆ.
ಶಶಿಕಲಾ ಪೂಜೆ: ಪರಪ್ಪನ ಅಗ್ರಹಾರದಲ್ಲಿ ಶಿವರಾತ್ರಿ ಪ್ರಯುಕ್ತ ಶಶಿಕಲಾ ರಾತ್ರಿಯಲ್ಲಾ ಶಿವನಪೂಜೆ ಮಾಡ್ತಿನಿ ಅಂತ ಕೂತಿದ್ರಂತೆ. ಬೆಳಗ್ಗೆಯಿಂದ ಐದಾರು ಬಾರಿ ತುಳಸಿ ಕಟ್ಟೆಯ ಕಡೆ ಬಂದು ಹೋಗಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.