ಮುಂಬೈ: ಸಾಲದ ಸುಳಿಗೆ ಸಿಲುಕಿರುವ ಅನಿಲ್ ಅಂಬಾನಿ ರಿಲಯನ್ಸ್ ಕಮ್ಯೂನಿಕೇಶನ್ಸ್(ಆರ್ಕಾಂ) ಸ್ಪೆಕ್ಟ್ರಂ ಟವರ್, ಆಪ್ಟಿಕಲ್ ಫೈಬರ್ ನೆಟ್ವರ್ಕ್ ಮತ್ತು ಇತರೆ ವೈರ್ಲೆಸ್ ಸಂಪತ್ತನ್ನು ಖರೀದಿಸಲು ಮುಕೇಶ್ ಅಂಬಾನಿ ಮುಂದಾಗಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯ ಜಿಯೋ ಇನ್ಫೋಕಾಂ ಲಿಮಿಟೆಡ್ಗೆ ತನ್ನ ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ರಿಲಯನ್ಸ್ ಕಮ್ಯೂನಿಕೇಷನ್ ಗುರುವಾರ ತಿಳಿಸಿದೆ.
ಎಷ್ಟು ಕೋಟಿ ರೂ.ಗಳ ಒಪ್ಪಂದ ನಡೆದಿದೆ ಎನ್ನುವುದನ್ನು ಎರಡೂ ಕಂಪೆನಿಗಳು ಬಹಿರಂಗ ಪಡಿಸಿಲ್ಲ. ಆದರೆ ಬ್ಯಾಂಕಿಂಗ್ ಮೂಲಗಳ ಪ್ರಕಾರ 24 ಸಾವಿರ ಕೋಟಿಗಳಿಂದ 25 ಸಾವಿರ ಕೋಟಿ ರೂ.ಗಳವರೆಗೆ ಈ ಒಪ್ಪಂದ ನಡೆದಿದೆ ಎಂದು ಅಂದಾಜಿಸಲಾಗಿದೆ. ಈ ಒಪ್ಪಂದ 2018ರ ಮಾರ್ಚ್ ಒಳಗಡೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
45 ಸಾವಿರ ಕೋಟಿ ರೂ. ಸಾಲ ಸುಳಿಗೆ ಆರ್ಕಾಂ ಸಿಲುಕಿದ್ದು, ರಿಲಯನ್ಸ್ ಸ್ಥಾಪಕ ಧೀರೂಭಾಯಿ ಅಂಬಾನಿ ಅವರ 85 ಜನ್ಮ ದಿನಾಚರಣೆ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಜಿಯೋದಿಂದ ಎರಡು ಹೊಸ ಪ್ಲಾನ್
ಆರ್ಕಾಂಗೆ ಸೇರಿದ ಸಂಪತ್ತು ಮಾರಾಟ ಮಾಡಿ ಬ್ಯಾಂಕ್ಗಳ 40 ಸಾವಿರ ಕೋಟಿ ರೂ. ಸಾಲವನ್ನು ಪಾವತಿ ಮಾಡಲಾಗುವುದು ಎಂದು ಅನಿಲ್ ಅಂಬಾನಿ ಮೊನ್ನೆ ತಿಳಿಸಿದ್ದರು. ಆರ್ಕಾಂ ಸೇರಿದ ಸಂಪತ್ತು ಖರೀದಿಯಿಂದ ತನ್ನ ಮನೆ ಮನೆಗಳಿಗೆ ಫೈಬರ್, ವೈಯರ್ಲೆಸ್ ಸೇವೆ ಮತ್ತು ಉದ್ಯಮ ಸೇವೆ ವಿಸ್ತರಿಸಲು ಸಹಾಯವಾಗಲಿದೆ ಎಂದು ಜಿಯೋ ತಿಳಿಸಿದೆ.
2016 ರ ಸೆಪ್ಟೆಂಬರ್ ನಲ್ಲಿ ಸೇವೆ ಆರಂಭಿಸಿದ ಜಿಯೋಗೆ ದೇಶದಲ್ಲಿ 16 ಕೋಟಿ ಗ್ರಾಹಕರಿದ್ದು, ನವೆಂಬರ್ ಮೊದಲ ವಾರದಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ 2ಜಿ ಕರೆ ಸೇವೆಯನ್ನು ಡಿಸೆಂಬರ್ 1ರಿಂದ ಸ್ಥಗಿತಗೊಳಿಸಲಿದ್ದೇವೆ ಎಂದು ಹೇಳಿತ್ತು.
ಇನ್ನು ಮುಂದೆ ಕೇವಲ 4ಜಿ ಸೇವೆಯನ್ನು ಮಾತ್ರ ನೀಡಲಾಗುವುದು. 4ಜಿ ಸೇವೆ ಬಳಸುತ್ತಿರುವ ಗ್ರಾಹಕರು ರಿಲಯನ್ಸ್ ಸೇವೆಯನ್ನು ಮುಂದುವರಿಸಬಹುದು. 2ಜಿ ಸೇವೆಯನ್ನು ಇನ್ನು ಮುಂದೆ ನೀಡಲು ಸಾಧ್ಯವಿಲ್ಲ. 2ಜಿ ಸೇವೆ ಬೇಕಿದ್ದಲ್ಲಿ ಬೇರೆ ಟೆಲಿಕಾಂ ಕಂಪೆನಿಗೆ ಹೋಗಬಹುದು ಎಂದು ತಿಳಿಸಿತ್ತು.
ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇತರ ಕಂಪೆನಿಗಳಿಗೆ ರಿಲಯನ್ಸ್ ಗ್ರಾಹಕರು ನಂಬರ್ ಪೋರ್ಟಿಂಗ್ ಅರ್ಜಿ ಹಾಕಿದರೆ ಪೋರ್ಟಿಂಗ್ ಮನವಿಯನ್ನು ಸ್ವೀಕರಿಸುವಂತೆ ಸೂಚಿಸಿತ್ತು.
ನಷ್ಟದಲ್ಲಿರುವ ಆರ್ಕಾಂ ಇತ್ತೀಚೆಗೆ ಏರ್ಸೆಲ್ ಕಂಪೆನಿಯನ್ನು ಖರೀದಿಸಲು ರಿಲಯನ್ಸ್ ಪ್ರಯತ್ನ ನಡೆಸಿತ್ತು. ಆದರೆ ಅದರಲ್ಲಿ ಯಶಸ್ವಿಯಾಗಿರಲಿಲ್ಲ. ಆಂಧ್ರಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಉತ್ತಪ್ರದೇಶ ಪೂರ್ವ ಮತ್ತು ಪಶ್ಚಿಮ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ 2ಜಿ ಮತ್ತು 4ಜಿ ಸೇವೆ ಯನ್ನು ರಿಲಯನ್ಸ್ ನೀಡುತ್ತಿದೆ. ಇದನ್ನೂ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು