ಬಾಗಲಕೋಟೆ: ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಸತ್ಯಜಿತ್ ಅವರು ಬಾಗಲಕೋಟೆ ಆಸ್ಪತ್ರೆಯಲ್ಲಿ ಕೃತಕ ಕಾಲು ಜೋಡಣೆ ಮಾಡಿಕೊಳ್ಳಲು ಆಗಮಿಸಿದ್ದು, ಈ ವೇಳೆ ಮಾತನಾಡಿದ ಅವರು ತನಗೆ ಆರ್ಥಿಕ ಸಹಾಯದ ಅಗತ್ಯವಿದ್ದು, ಸಹಾಯವನ್ನು ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ನಟ ಸತ್ಯಜಿತ್ ಕಾಲು ಜೋಡಣೆಗಾಗಿ ಬಾಗಲಕೋಟೆಗೆ ಆಗಮಿಸಿದ್ದಾರೆ. ಸತ್ಯಜಿತ್ ಅವರ ಕಾಲಿಗೆ ಗ್ಯಾಂಗ್ರಿನ್ ಉಂಟಾಗಿ ಕಾಲು ಕಳೆದುಕೊಂಡಿದ್ದರು. ಕೃತಕ ಕಾಲು ಜೋಡಣೆ ಮಾಡಲು ಬೆಂಗಳೂರಿನಲ್ಲಿ 4 ಲಕ್ಷ 80 ಸಾವಿರ ಕೇಳಿದ್ದರು. ಆದರೆ ಬಾಗಲಕೋಟೆಯ ವೈದ್ಯರಾದ ಶ್ರೀಧರ ನಾಯಕ್ ಎಂಬುವರು ಕೇವಲ 2 ಲಕ್ಷ 20 ಸಾವಿರದಲ್ಲಿ ಕೃತಕ ಕಾಲು ಜೋಡಣೆ ಒಪ್ಪಿಗೆ ಸೂಚಿಸಿದ್ದಾರೆ.
ಈ ಸಂರ್ಭದಲ್ಲಿ ಮಾತನಾಡಿದ ನಟ ಸತ್ಯಜಿತ್, ತನಗೆ ಕಲಾವಿದರ ಸಂಘದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಕಲಾವಿದರ ಸಂಘಕ್ಕೆ ಎಷ್ಟು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ತಮ್ಮ ಆರ್ಥಿಕ ಪರಿಸ್ಥಿತಿ ತೀರ ಕೆಟ್ಟದಾಗಿದೆ ಎಂದು ಹೇಳಿದರು.
ಅಲ್ಲದೇ ತನಗೆ ಆರ್ಥಿಕ ಸಹಾಯದ ಅಗತ್ಯವಿದ್ದು, ನಟ ಅಂಬರೀಶ್ ಈವರೆಗೂ ಫೋನ್ ಮಾಡಿ ಹೇಗಿದ್ದೀಯಾ ಎಂದು ಕೇಳಿಲ್ಲ. ನಟ ದರ್ಶನ್ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವೇಳೆ ತಾನೇ ತೂಗುದೀಪ ಶ್ರೀನಿವಾಸ್ ಮಗ ಎಂದು ಪರಿಚಯಿಸಿದ್ದೆ. ಅವರು ಈಗ ಉತ್ತಮ ನಟರಾಗಿ ಬೆಳೆದಿದ್ದಾರೆ. ನನ್ನ ಮಗ ಮೂರು ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾನೆ. ಆದರೇ ಆತನಿಗೂ ಸಮರ್ಪಕ ಅವಕಾಶ ಸಿಗುತ್ತಿಲ್ಲ. ಚಿತ್ರರಂಗದಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಸಿನಿಮಾ ಮಾಡಲು ಉತ್ತರ ಕರ್ನಾಟಕದ ನಿರ್ಮಾಪಕರು ಮುಂದೆ ಬರಬೇಕು. ಉತ್ತರ ಕರ್ನಾಟಕ ಭಾಷೆಯಲ್ಲೇ ಸಿನಿಮಾ ಮಾಡುವುದಕ್ಕೆ ನನ್ನ ಬಳಿ ಕಥೆ ಸಿದ್ಧವಿದೆ ಎಂದರು.
ಕಳೆದ 35 ವರ್ಷ ಕನ್ನಡ ಚಿತ್ರೋದ್ಯಮದಲ್ಲಿ ಮಲತಾಯಿ ಮಕ್ಕಳ ಹಾಗೆ ಬೆಳೆದಿದ್ದೇವೆ. ಸಿನಿಮಾ ಅಂದರೆ ಕೇವಲ ಬೆಂಗಳೂರು ಮಾತ್ರವಲ್ಲ. ಚಿತ್ರೋದ್ಯಮ ಜೀವಂತವಿರೋದು ಉತ್ತರ ಕರ್ನಾಟಕದವರಿಂದಲೇ. ಕಾಲು ಜೋಡಣೆ ನಂತರ ಮತ್ತೆ ಚಿತ್ರಗಳಲ್ಲಿ ನಟಿಸುತ್ತೇನೆ. ಚಿತ್ರರಂಗಕ್ಕೆ ಉತ್ತರಕರ್ನಾಟಕದ ಪ್ರತಿಭೆಗಳು ಬರಬೇಕು ಎಂದು ತಮ್ಮ ಅಭಿಲಾಷೆ ವ್ಯಕ್ತಪಡಿಸಿದರು.