ಕೊಪ್ಪಳ: ಹಿಂದೂ ರಕ್ತ ಹರಿಯುವ ಯಾವೊಬ್ಬ ವ್ಯಕ್ತಿಯೂ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿಗೆ ವೋಟ್ ಹಾಕುವುದಿಲ್ಲ ಎಂದು ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿರೋ ಚೈತ್ರಾ, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಗುಡುಗಿದ್ದರು. ಬಿಜೆಪಿ ಮತ್ತು ಸಂಘ ಪರಿವಾರದವರು ಹಿಂದೂಗಳಲ್ಲ ಎಂಬ ಅನ್ಸಾರಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇಕ್ಬಾಲ್ ಅನ್ಸಾರಿ ಹಿಂದೂ ಸಮಾಜಕ್ಕೆ ಹೆದರಿದ್ದಾರೆ. ಯಾರ ಮೈಯಲ್ಲಿ ಹಿಂದೂ ರಕ್ತ ಹರಿಯುತ್ತದೆಯೋ ಅವರು ಯಾರು ನಿಮಗೆ ಮತ ಹಾಕುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಬಾರಿ ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿಗೆ ಒಂದೇ ಒಂದು ಹಿಂದೂವಿನ ವೋಟು ಬೀಳುವುದಿಲ್ಲ. ಗಂಗಾವತಿಯಲ್ಲಿ ರಾಮ ಮತ್ತು ಅಲ್ಲಾನ ನಡುವೆ ಯುದ್ಧ ನಡೆಯುತ್ತಿದೆ. ಇಲ್ಲಿ ರಾಮನೇ ಗೆಲ್ಲೋದು. ರಾವಣನ ಜಾಗದಲ್ಲಿ ನೀವು ಇದ್ದೀರಾ, ಈ ಬಾರಿ ರಾವಣನ ಸಂಹಾರ ನಡೆಯಲಿದೆ, ಭಜರಂಗಿಗಳ ಜಾಗದಲ್ಲಿ ಹಿಂದೂ ಕಾರ್ಯಕರ್ತರು ಇದ್ದಾರೆ. ನೀವು ಫೇಕ್ ಹಿಂದೂತ್ವವಾದಿ ಎಂದು ಚೈತ್ರಾ ಕುಂದಾಪೂರ ಆರೋಪಿಸಿದ್ರು.
ದೀಪ ನಂದಿ ಹೋಗುವ ಮುನ್ನ ಬಹಳ ಉರಿಯುತ್ತದೆ. ಇದೀಗ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿ ಪರಿಸ್ಥಿತಿಯೂ ಹಾಗೆ ಆಗಿದೆ ಎಂದು ಅನ್ಸಾರಿ ವಿರುದ್ಧ ವಾಗ್ದಾಳಿ ನೆಡೆಸಿದ್ದರು.
ಈ ಹಿಂದೆ ಆಗಮಿಸಿದ್ದ ವೇಳೆ ಹಿಂದೂಗಳು ಶ್ರೀರಾಮನ ಹೆಸರಲ್ಲಿ ಕೊಲೆ ದರೋಡೆ ಮಾಡುತ್ತಾರೆ ಎಂಬ ಅನ್ಸಾರಿಯ ವಿವಾದಾತ್ಮಕ ಹೇಳಿಕೆಗೂ ಚೈತ್ರಾ ಟಾಂಗ್ ನೀಡಿದ್ದರು. ಇದೀಗ ಮತ್ತೆ ಟಾಂಗ್ ನೀಡಿರೋ ಚೈತ್ರಾ, ನಿಮ್ಮ ಕಾರ್ಯಕರ್ತರು ಧ್ವಜ ಕಟ್ಟುವ ವಿಷಯಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡಿದಾಗಲೇ ನಿಮ್ಮ ಅಧಃಪತನದ ಕಾಲ ಆರಂಭವಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದವರಿಗೆಲ್ಲ ಇದೇ ಗತಿ ಎಂದು ಚೈತ್ರಾ ತಿರುಗೇಟು ನೀಡಿದ್ದರು.