ಬಾಗಲಕೋಟೆ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಸಿಗದ ಕಾರಣ ಮಹಿಳೆಯೊಬ್ಬರಿಗೆ ಆಂಬುಲೆನ್ಸ್ ನಲ್ಲೇ ಹೆರಿಗೆಯಾಗಿ ಮಗು ಹುಟ್ಟಿದ ತಕ್ಷಣವೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ನಡೆದಿದೆ.
ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ತಡರಾತ್ರಿ ಆಸ್ಪತ್ರೆ ಮುಂದೆ ಮಗುವಿನ ಶವ ಹೊತ್ತು ತಾಯಿ, ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಭಾರತಿ ತೊಗಲದೋಣಿ ಎಂಬ 31 ವರ್ಷದ ಗರ್ಭಿಣಿ ಹೆರಿಗೆಗಾಗಿ ಹಲಕುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಮಂಜುಳಾ ಗುರಾಣಿ ನಿಲರ್ಕ್ಷ್ಯದ ಹಿನ್ನೆಲೆಯಲ್ಲಿ ಹುಟ್ಟಿದ ಮಗು ಸಾವನ್ನಪಿದೆ ಎಂದು ಗರ್ಭಿಣಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಭಾರತಿ ಹೆರಿಗೆ ಬೇನೆಯಿಂದ ಶುಕ್ರವಾರ ಸಂಜೆ ಆರು ಗಂಟೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ ಎನ್ನಲಾಗಿದೆ. ಎರಡು ಗಂಟೆಗಳ ಕಾಲ ಗರ್ಭಿಣಿ ಮತ್ತು ಕುಟುಂಬಸ್ಥರು ವೈದ್ಯರಿಗಾಗಿ ಕಾಯ್ದಿದ್ದಾರೆ. ಆದರೆ ವೈದ್ಯರು ಬಾರದಿದ್ದಾಗ ಬಾದಾಮಿ ತಾಲೂಕಾಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಭಾರತಿಗೆ ಹೆರಿಗೆ ನೋವು ಜಾಸ್ತಿಯಾಗಿ ಆಂಬುಲೆನ್ಸ್ ನಲ್ಲೇ ಹೆರಿಗೆಯಾಗಿದೆ. ಹೆರಿಗೆಯಾದ ತಕ್ಷಣವೇ ಹೆಣ್ಣುಮಗು ಸಾವನ್ನಪ್ಪಿದೆ. ಇದರಿಂದ ಕುಟುಂಬಸ್ಥರು ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ.
24×7 ಹೆರಿಗೆ ಮತ್ತು ಚಿಕಿತ್ಸಾ ಸೌಲಭ್ಯವಿರಬೇಕಾದ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದಿರೋದು ಮಗುವನ್ನು ಬಲಿ ಪಡೆದುಕೊಂಡಂತಾಗಿದೆ. ಇನ್ನು ಆಸ್ಪತ್ರೆ ವೈದ್ಯೆ ಮಂಜುಳಾ ಗುರಾಣಿ ಅವರು ಆಸ್ಪತ್ರೆಗೆ ಬಂದಿರದಿದ್ದಾಗ ಸ್ಥಳದಲ್ಲಿದ್ದ ನರ್ಸ್ ಗಳು ನಮ್ಮ ಡ್ಯೂಟಿ ಇಲ್ಲ ಎಂದು ನಿರ್ಲಕ್ಷ್ಯ ಮಾಡಿದ್ದಾರೆ. ಘಟನೆ ಬಗ್ಗೆ ಮಂಜುಳಾ ಗುರಾಣಿ ಅವರಿಗೆ ಕರೆ ಮಾಡಿದರೆ ನನ್ನದು ಸಂಜೆ ಆರು ಗಂಟೆವರೆಗೂ ಮಾತ್ರ ಡ್ಯೂಟಿ. ಏನೇ ಹೇಳೋದಿದ್ದರೂ ಡಿಹೆಚ್ಓ ಗೆ ಹೇಳ್ರಿ ಎಂದು ಬೇಜವಾಬ್ದಾರಿತನದಿಂದ ಉತ್ತರಿಸಿದ್ದಾರೆ.
ಸದ್ಯ ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಅನಂತ ದೇಸಾಯಿ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.