ಬೆಂಗಳೂರು: ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ಅವರ ಪಿಎ ವಿನಯ್ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಈ ಅಪಹರಣದ ಹಿಂದೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅರಸ್ ಕೈವಾಡ ಇದೆ ಎನ್ನುವ ಆರೋಪ ಕೇಳಿ ಬಂದಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ರಾಜೇಂದ್ರ ಅರಸ್ ಆಣತಿಯಂತೆ ನಾವು ವಿನಯ್ ಅವರನ್ನು ಕಿಡ್ನಾಪ್ ಮಾಡಲು ಮುಂದಾಗಿದ್ದು ಎಂದು ವಿಚಾರಣೆ ವೇಳೆ ಹೇಳಿದ ಹಿನ್ನೆಲೆಯಲ್ಲಿ ಪೊಲೀಸರು ರಾಜೇಂದ್ರ ಅರಸ್ ಅವರನ್ನು ಎ1 ಆರೋಪಿಯನ್ನಾಗಿಸಿ ತನಿಖೆ ಮುಂದುವರಿಸುತ್ತಿದ್ದಾರೆ.
ಪೊಲೀಸರ ಹುಡುಕಾಟದ ಬೆನ್ನಲ್ಲೇ ಕೋರ್ಟ್ ನಿಂದ ರಾಜೇಂದ್ರ ಅರಸ್ ಜಾಮೀನು ಪಡೆದುಕೊಂಡಿದ್ದಾರೆ. ಈ ವೇಳೆ ಕೋರ್ಟ್ ಎರಡು ದಿನದ ಒಳಗಡೆ ವಿಚಾರಣೆಗೆ ಹಾಜರಾಗುವಂತೆ ರಾಜೇಂದ್ರಗೆ ಸೂಚಿಸಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬುಧವಾರ ವಿಚಾರಣೆಗೆ ಹಾಜರಾಗುವುದಾಗಿ ರಾಜೇಂದ್ರ ಅರಸ್ ಪೊಲೀಸರಿಗೆ ತಿಳಿಸಿದ್ದಾರೆ.
ಏನಿದು ಪ್ರಕರಣ?
ಮೇ 11ರಂದು ಮಹಾಲಕ್ಷ್ಮೀ ಲೇಔಟ್ ಬಳಿ ವಿನಯ್ ಅವರ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಏಕಾಏಕಿ ಸುತ್ತುವರಿದು ಅಪಹರಿಸಲು ಯತ್ನಿಸಿತ್ತು. ಬೈಕ್ ನಲ್ಲಿ ಬಂದಿದ್ದ ಇಬ್ಬರು ವಿನಯ್ ಮೇಲೆ ಹಲ್ಲೆ ನಡೆಸಿದ್ದರು. ಅಪಹರಣಕ್ಕೆ ಯತ್ನಿಸಲು ಮುಂದಾದಾಗ ವಿನಯ್ ರಕ್ಷಣೆಗಾಗಿ ಕೂಗಿಕೊಂಡಿದ್ದರು.