ಬಾಗಲಕೋಟೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಒಂದರ ಹಿಂದೊಂದು ಹೊಸ ರಾಜಕೀಯ ಪಕ್ಷಗಳು ತಲೆ ಎತ್ತುತ್ತಿವೆ. ಹೊಸ ಪಕ್ಷಗಳ ಉದ್ಘಾಟನೆಗೆ ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ ಕ್ಷೇತ್ರದಲ್ಲಿ ಇಂದು ರಾಜ್ಯದಲ್ಲಿ ಮತ್ತೊಂದು ಹೊಸ ರಾಜಕೀಯ ಪಕ್ಷವೊಂದರ ಉದ್ಘಾಟನೆಗೆ ವೇದಿಕೆ ಸಜ್ಜಾಗಿದೆ. ಜನಸಾಮಾನ್ಯರ ಪಕ್ಷ ಎನ್ನುವ ಹೆಸರಿನಡಿ ಇದಕ್ಕೆ ಚಾಲನೆ ದೊರೆಯಲಿದೆ.
ಜನಸಾಮಾನ್ಯರಿಂದ ಜನಸಾಮಾನ್ಯರಿಗಾಗಿ ನಮ್ಮ ಪಕ್ಷ ಎನ್ನುವುದು ಸಂಘಟಿಕರ ಘೋಷಣೆ ಆಗಿದೆ. ಇದೇ ಕಾರಣಕ್ಕೆ ಇಂದು ಪಕ್ಷದ ಉದ್ಘಾಟನೆಯನ್ನು ಸಹ ಜನಸಾಮಾನ್ಯರಿಂದಲೇ ಮಾಡಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸಮಾನತಾವಾದಿ ಅಣ್ಣ ಬಸವಣ್ಣನ ಐಕ್ಯ ಸ್ಥಳವಾದ ಕೂಡಲಸಂಗಮದಲ್ಲಿ ಬೆಳಗ್ಗೆ 11.30ಕ್ಕೆ ಹೊಸ ಪಕ್ಷಕ್ಕೆ ಚಾಲನೆ ದೊರೆಯಲಿದೆ.
ಬಸ್ ನಿಲ್ದಾಣದ ಬಳಿಯ ಬಯಲು ಜಾಗದಲ್ಲಿ ಬೃಹತ್ ವೇದಿಕೆ ಹಾಕಲಾಗಿದ್ದು, ಅಂದಾಜು ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಲ್ಲಿ ಇದ್ದಾರೆ. 45 ಸಾವಿರ ಆಸನಗಳ ವ್ಯವಸ್ಥೆ ಮಾಡಿದ್ದು, ಒಂದು ಲಕ್ಷ ಜನರಿಗೆ ಊಟಕ್ಕೆಂದು ಮಾದಲಿ, ಪಲಾವ್ ಮಾಡಲಾಗುತ್ತಿದೆ.