ಕೊಪ್ಪಳ: ಬೆಳ್ಳಿಯ ಒಡವೆಗಾಗಿ ಪಕ್ಕದ ಮನೆ ಮಹಿಳೆಯೊಬ್ಬಳು ಮಗುವನ್ನು ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುಕನೂರಿನ ಯಡಿಯಾಪುರದಲ್ಲಿ ನಡೆದಿದೆ.
ಒಂದೂವರೆ ವರ್ಷದ ಪ್ರತಿಭಾ ಕೊಲೆಯಾಗಿರುವ ಮಗು. ಅಂಬವ್ವ ಕೊಲೆ ಮಾಡಿರುವ ಆರೋಪಿ. ಪ್ರತಿಭಾ ಒಡವೆಗಳನ್ನು ಹಾಕಿಕೊಂಡು ಸಂಜೆ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದಳು. ಇದನ್ನ ಗಮನಿಸಿದ ಅಂಬವ್ವ ಆಕೆಯನ್ನು ಮನೆಗೆ ಕರೆದೊಯ್ದು ಒಡವೆಗಳನ್ನು ಬಿಚ್ಚಿಕೊಂಡು ಮಗುವನ್ನು ಕೊಂದಿದ್ದಾಳೆ.
ಪ್ರತಿಭಾ ಕಾಣೆಯಾಗಿದ್ದ ಕಾರಣ ತಂದೆ ಶಿವಲಿಂಗ ಹಾಗೂ ಕುಟುಂಬದವರು ಅಕ್ಕಪಕ್ಕದ ಮನೆಯಲೆಲ್ಲಾ ಹುಡುಕಾಡಿದ್ದರು. ನಂತರ ಅಂಬವ್ವ ವಿಚಿತ್ರವಾಗಿ ವರ್ತಿಸುತ್ತಿದ್ದ ಕಾರಣ ಆಕೆಯ ಮೇಲೆ ಅನುಮಾನಗೊಂಡು ಮನೆಯೊಳಗೆ ಹೋಗಿ ನೋಡಿದಾಗ ಮಗುವಿನ ಮೃತದೇಹವನ್ನು ಚೀಲದಲ್ಲಿ ಕಟ್ಟಿದ್ದಳು.
ಸುಮಾರು 4,000 ರೂ. ಬೆಲೆ ಬಾಳುವ ಒಡವೆಗಳನ್ನು ದೋಚಿ, ಅಂಬವ್ವ ಮಗುವಿಗೆ ಉರುಳು ಹಾಕಿ ಕೊಂದಿದ್ದಾಳೆ ಎಂದು ಹೇಳಲಾಗಿದೆ. ಸದ್ಯ ಆರೋಪಿ ಅಂಬವ್ವಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.