ಮುಂಬೈ: ಸಾಫ್ಟ್ ವೇರ್ ಕಂಪೆನಿಗಳಲ್ಲಿ ಹಿರಿಯ ಅಧಿಕಾರಿಗಳು ತಮಗೆ ತಾವೇ ಭಾರೀ ವೇತನವನ್ನು ಏರಿಕೆ ಮಾಡುವುದು ಸರಿಯಲ್ಲ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.
ಬಾಂಬೆ ಐಐಟಿಯಲ್ಲಿ ಮಾತನಾಡಿದ ಅವರು, ಐಟಿ ಕಂಪನಿಗಳಲ್ಲಿ ಕಿರಿಯರು ಮತ್ತು ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ವೇತನ ಏರಿಕೆ ನಿರಾಕರಿಸುತ್ತಿರುವ ಬೆಳವಣಿಗೆ ಕಳವಳಕಾರಿಯಾಗಿದೆ. ಹಿರಿಯ ಅಧಿಕಾರಿಗಳು ಕಿರಿಯರಿಗಾಗಿ ಸಂಬಳ ಏರಿಕೆಯನ್ನು ತ್ಯಾಗ ಮಾಡಬೇಕು ಎಂದು ತಿಳಿಸಿದರು.
ದೊಡ್ಡ ಹುದ್ದೆಯಲ್ಲಿ ಇರುವವರು ಭಾರೀ ವೇತನ ಏರಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಹೆಚ್ಚಿನ ಜನರು ಬಡತನ ಅನುಭವಿಸುತ್ತಿರುವಾಗ ಈ ರೀತಿ ವೇತನ ಏರಿಕೆಯನ್ನು ಬಂಡವಾಳ ಶಾಹಿ ಒಪ್ಪುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾರಾಯಣ ಮೂರ್ತಿ ಅವರು ಹಿರಿಯ ಅಧಿಕಾರಿಗಳ ಸಂಬಳ ಕುರಿತಾಗಿ ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಹೊಸದಾಗಿ ಸೇರ್ಪಡೆಯಾಗಿರುವ ಯುವ ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರ ಅಲ್ಲ. ಇದರ ಬದಲಾಗಿ ಹಿರಿಯ ಮ್ಯಾನೇಜ್ಮೆಂಟ್ ಹಂತದಲ್ಲಿರುವ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸುವುದು ಉತ್ತಮ ಎಂದು ಸಲಹೆ ನೀಡಿದ್ದರು. ಇದನ್ನೂ ಓದಿ: ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ
ನಮ್ಮ ಇನ್ಫೋಸಿಸ್ ಉದಾಹರಣೆ ತೆಗೆದುಕೊಳ್ಳಿ. 2011ರ ವೇಳೆ ಸಾಫ್ಟ್ ವೇರ್ ಉದ್ಯಮಕ್ಕೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಹಿರಿಯ ಹಂತದ ಮ್ಯಾನೇಜ್ಮೆಂಟ್ ನಲ್ಲಿರುವ ವ್ಯಕ್ತಿಗಳೆಲ್ಲ ಸಭೆ ನಡೆಸಿದೆವು. ಸಭೆಯಲ್ಲಿ ಸಂಬಳವನ್ನು ಕಡಿತಗೊಳಿಸುವ ತೀರ್ಮಾನವನ್ನು ಮಾಡಿದೆವು. ಯುವ ಟೆಕ್ಕಿಗಳಿಗೆ ಜಾಬ್ ನೀಡಲು ಮತ್ತು ಅವರನ್ನು ರಕ್ಷಿಸಲು ಹಿರಿಯ ಸಿಬ್ಬಂದಿ ಈ ತ್ಯಾಗದ ನಿರ್ಧಾರವನ್ನು ಈಗ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.
ಸುಮ್ಮನೆ ಉದ್ಯೋಗಿಯನ್ನು ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರ ಅಲ್ಲ. ಯಾಕೆಂದರೆ ಅವರನ್ನು ನಂಬಿಕೊಂಡ ಕುಟುಂಬವು ಇದೆ. 2008, 2011ರಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಹೀಗಾಗಿ ಸಮಸ್ಯೆ ನಮಗೆ ಹೊಸದೆನಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಸೃಷ್ಟಿಯಾಗದೇ ಇರಲು ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ನಾರಾಯಣ ಮೂರ್ತಿ ತಿಳಿಸಿದ್ದರು. ಇದನ್ನೂ ಓದಿ: ಇನ್ಫಿ ಸಿಒಒಗೆ ಭಾರೀ ಪ್ರಮಾಣದ ಸಂಬಳ ಏರಿಸಿದ್ದಕ್ಕೆ ನಾರಾಯಣ ಮೂರ್ತಿ ಆಕ್ಷೇಪ