ಶಿವಮೊಗ್ಗ: ಕನ್ನಡ ಭಾಷೆ ಈಗ ಚುನಾವಣಾ ವಸ್ತುವೂ ಆಗ್ಬಿಟ್ಟಿದೆ. ಕಾಳಜಿ ಮಾತ್ರ ಯಾರಿಗೂ ಇಲ್ಲ. ಆದ್ರೆ, ಶಿವಮೊಗ್ಗದ ಇವತ್ತಿನ ಪಬ್ಲಿಕ್ ಹೀರೋ ಮೂರ್ತಿ ಅನ್ನೋವವರು ತಮ್ಮ ಅಂಗಡಿಯಲ್ಲೇ ಮಿನಿ ಲೈಬ್ರರಿ ನಿರ್ಮಿಸಿದ್ದಾರೆ.
ಕನ್ನಡ ಕಸ್ತೂರಿ ಇಸ್ತ್ರಿ ಅಂಗಡಿ ಅಂತ ಶಿವಮೊಗ್ಗದ ಹೃದಯ ಭಾಗವಾಗಿರುವ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿದೆ. ಇದರ ಮಾಲೀಕ ನರಸಿಂಹ ಮೂರ್ತಿ. ಬಟ್ಟೆಗಳನ್ನು ಇಸ್ತ್ರೀ ಮಾಡೋದಷ್ಟೇ ಅಲ್ಲದೆ ಭಾಷಾ ಪ್ರೇಮವನ್ನೂ ಸಾರುತ್ತಿದ್ದಾರೆ. 25 ವರ್ಷದಿಂದ ಇಸ್ತ್ರಿ ಅಂಗಡಿ ಇಟ್ಟುಕೊಂಡಿರೋ ಮೂರ್ತಿ, ಹತ್ತು ವರ್ಷದ ಹಿಂದೆ ತನ್ನ ಅಂಗಡಿಗೆ ಕನ್ನಡ ಕಸ್ತೂರಿ ಇಸ್ತ್ರೀ ಅಂಗಡಿ ಅಂತ ಹೆಸರಿಟ್ಟಿದ್ದಾರೆ. ಜ್ಞಾನಪೀಠ ಪುರಸ್ಕೃತರ ಫೋಟೋಗಳು ಅಂಗಡಿ ತುಂಬಾ ರಾರಾಜಿಸ್ತಿವೆ. ಹೀಗಾಗಿ, ಇವರನ್ನ ಕನ್ನಡ ಮೂರ್ತಿ ಅಂತ ಸ್ನೇಹಿತರು ಕರೀತಿದ್ದಾರೆ.
ಭುವನೇಶ್ವರಿ ಫೋಟೋಗೆ ನಿತ್ಯ ಪೂಜೆ ಮಾಡಿ ನಂತರ ಕೆಲಸ ಶುರು ಮಾಡೋ ನರಸಿಂಹ ಮೂರ್ತಿ, ಅಂಗಡಿಯಲ್ಲಿ ಕನ್ನಡ ಪುಸ್ತಕಗಳನ್ನ ಇಟ್ಟಿದ್ದಾರೆ. ಇಸ್ತ್ರೀಗಾಗಿ ಬಟ್ಟೆ ತಂದವರು ಸುಮ್ಮನೆ ಕಾಯುವ ಬದಲು ಪುಸ್ತಕ ಓದುವಂತೆ ಹೇಳುತ್ತಾರೆ. ಇದಕ್ಕಾಗಿ ಪುಟ್ಟ ಲೈಬ್ರರಿಯನ್ನು ಮಾಡಿದ್ದಾರೆ. ಇನ್ನು ಕನ್ನಡರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಗಳನ್ನ ತಪ್ಪದೆ ಆಚರಿಸ್ತಾರೆ.
ಇವರ ಬಗ್ಗೆ ಮಾಹಿತಿ ಪಡೆದವರು ಬಸ್ ನಿಲ್ದಾಣದಿಂದ ಇಳಿದು ನೇರವಾಗಿ ಇವರ ಕನ್ನಡ ಪ್ರೀತಿ ಬಗ್ಗೆ ಮಾತನಾಡಿಸಿ ಹೋಗ್ತಿದ್ದಾರೆ.
https://www.youtube.com/watch?v=Lwe1szpDiCA