ಬೆಳಗಾವಿ: ನಾಟ್ಯ ಭೂಷಣ, ನಾಡೋಜ, ಶತಾಯುಷಿ, ರಂಗಭೂಮಿ ಭೀಷ್ಮ ಬಾಳಪ್ಪ (104) ವಿಧಿವಶರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಾಳಪ್ಪ ಅವರಿಗೆ ಕಳೆದ ಮೂರು ವರ್ಷಗಳಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಶತಾಯುಷಿ ಬಾಳಪ್ಪ ಅವರು ಏಣಗಿ ಗ್ರಾಮದಲ್ಲಿ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
ನೂರಾರು ನಾಟಕ, ಚಲನಚಿತ್ರದಲ್ಲಿ ಅಭಿನಯಿಸಿರುವ ಹಿರಿಯ ಕಲಾವಿದ ಏಣಗಿ ಬಾಳಪ್ಪ ಅವರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ 11 ಘಂಟೆಗೆ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬಾಳಪ್ಪನ್ನನವರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
10ನೆಯ ತರಗತಿಯಲ್ಲಿ ಓದುತ್ತಿರುವಾಗಲೇ ರಂಗಭೂಮಿ ಪ್ರವೇಶಿಸಿದ ಅವರು ಸ್ತ್ರೀ ಪಾತ್ರಗಳ ಮೂಲಕವೂ ಜನಜನಿತರಾದರಲ್ಲದೆ ಅಪಾರ ಖ್ಯಾತಿಯನ್ನು ಪಡೆದರು. ‘ಕಿತ್ತೂರು ರುದ್ರಮ್ಮ’ ನಾಟಕದ ರುದ್ರಮ್ಮನ ಪಾತ್ರ ಇವರ ಮೊಟ್ಟಮೊದಲ ಸ್ರೀಪಾತ್ರ. ಚಿಕ್ಕೋಡಿ ಸಿದ್ಧಲಿಂಗ ಸ್ವಾಮೀಜಿಯವರ ಕಂಪೆನಿಯ ಮಹಾನಂಜ ನಾಟಕದಲ್ಲಿ ಪ್ರಹ್ಲಾದನಾಗಿ ಮನೋಜ್ಞ ಅಭಿನಯ ನೀಡಿದ್ದರು, ರಂಗ ಭೂಮಿಯ ದಾಖಲೆಯಾಗಿತ್ತು.
ಹಲವು ವಿಡಂಬನಾ ನಾಟಕಗಳಲ್ಲಿ ನಟಿಸಿದ್ದ ಬಾಳಪ್ಪ ಅವರು ಬಸವೇಶ್ವರ ಪಾತ್ರದ ಮೂಲಕ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು. ಕನ್ನಡ ಚಿತ್ರಗಳಲ್ಲೂ ನಟಿಸಿದ್ದ ಬಾಳಪ್ಪ ಅವರು ಶಿವರಾಜ್ ಕುಮಾರ್ ಅಭಿನಯಿಸಿದ್ದ ಗಡಿ ಬಿಡಿ ಕೃಷ್ಣ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.
ಖ್ಯಾತ ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ ಅವರ ನಿಧನ ಸುದ್ದಿ ಆಘಾತ ತಂದಿದೆ. ಕಲೆಯ ಮೂಲಕ ನಾಡಿನ ಜನಮಾನಸದಲ್ಲಿ ಚಿರಸ್ಥಾಯಿಯಾದ ಹಿರಿಯರ ಆತ್ಮಕ್ಕೆ ಶಾಂತಿ ಕೋರುತ್ತೇನೆ. pic.twitter.com/Tg16geNteM
— CM of Karnataka (@CMofKarnataka) August 18, 2017