ಮೈಸೂರು: ದಸರಾದ ಪ್ರಮುಖ ವಿಶೇಷ ಆಕರ್ಷಣೆ ಜಂಬೂ ಸವಾರಿಯಾದರೆ ನಂತರದಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವುದು ಸ್ತಬ್ಧಚಿತ್ರ ಪ್ರದರ್ಶನ. ಈ ಬಾರಿಯೂ ಪ್ರತಿ ವರ್ಷದಂತೆ ದಸರಾ ಸ್ತಬ್ಧಚಿತ್ರ ಪ್ರದರ್ಶನ ಕೈಗೊಳ್ಳಲಾಗಿದೆ. ಆದರೆ ಬಾರಿಯ ಸ್ತಬ್ಧಚಿತ್ರ ಪ್ರದರ್ಶನದ ಮೇಲೆ ಮುಂದಿನ ವಿಧಾನ ಸಭೆ ಚುನಾವಣೆಯ ಬಿಸಿ ತಟ್ಟಿದ್ದು, ಸರ್ಕಾರದ ಸಾಧನೆಯನ್ನು ಬಿಂಬಿಸುವಂತಹ ಸ್ತಬ್ಧಚಿತ್ರಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿವೆ.
ಈ ಬಾರಿಯ ಜಂಬೂ ಸವಾರಿಯಲ್ಲಿ ಒಟ್ಟು 40 ಸ್ತಬ್ಧಚಿತ್ರಗಳು ಸಾಗಲಿದ್ದು, ರಾಜ್ಯದ ವಿವಿಧ ಕಲೆ, ಸಂಸ್ಕøತಿಯನ್ನು ಬಿಂಬಿಸುವ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ತಬ್ಧಚಿತ್ರಗಳು ಸಿದ್ಧವಾಗಿದೆ.
ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಪ್ರಮುಖವಾಗಿ ಬೆಂಗಳೂರು ಜಿಲ್ಲೆಯ ಇಂದಿರಾ ಕ್ಯಾಂಟೀನ್ ಸ್ತಬ್ಧಚಿತ್ರ, ದಾವಣಗೆರೆ ಜಿಲ್ಲೆಯ ಸ್ವಚ್ಛ ಭಾರತ್ ಮಿಷನ್ ಸ್ತಬ್ಧಚಿತ್ರ, ಹಾವೇರಿ ಜಿಲ್ಲೆಯ ಕನಕದಾಸರ ಅರಮನೆ ಬಾಡಾದ ಸ್ತಬ್ಧಚಿತ್ರ ಹಾಗೂ ವಾರ್ತಾ ಇಲಾಖೆಯ ನುಡಿದಂತೆ ನಡೆದಿದ್ದೇವೆ ಅನ್ನೋ ಸರ್ಕಾರದ ಘೋಷವಾಕ್ಯ ಸ್ತಬ್ಧಚಿತ್ರ ಈ ಬಾರಿಯ ವಿಶೇಷವಾಗಿ ಕಾಣಿಸಲಿವೆ.
ಇನ್ನುಳಿದಂತೆ ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು, ರಾಯಚೂರು ಜಿಲ್ಲೆಯ ಚಿಕ್ಕಬೂದುರು ಬಹು ಕಮಾನ್ ಚೆಕ್ ಡ್ಯಾಂ, ಬಾದಾಮಿಯ ಭೂತನಾಥ ದೇವಾಲಯ, ಬೀದರ ಜಿಲ್ಲೆಯ ಮಾಡಿವಾಳ ಮಾಚಿ ದೇವರ ಹೊಂಡ ಬಸವ ಕಲ್ಯಾಣ ಸ್ತಬ್ಧಚಿತ್ರಗಳು ಪ್ರಮುಖ ಆಕರ್ಷಣೆಯಾಗಿವೆ.