ದಾವಣಗೆರೆ: ಐಸ್ ಕ್ರೀಂ ಮಾಡುತ್ತಾ ದಾವಣಗೆರೆಯಲ್ಲಿ ನೆಲೆಸಿದ್ದ ಉತ್ತರ ಪ್ರದೇಶದ ಮೂಲದ ಶಕ್ತಿ ರಾಮ್ ಎಂಬ ವ್ಯಕ್ತಿ ಮೃತಪಟ್ಟಿದ್ದು, ಮೃತನ ಶವವನ್ನು ಸ್ವಗ್ರಾಮಕ್ಕೆ ರವಾನಿಸಲು ಅವರ ಕುಟುಂಬಕ್ಕೆ ಮಸ್ಲಿಮರು ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಬಾಷಾ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಐಸ್ ಕ್ರೀಂ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶಕ್ತಿರಾಮ್ ಸೋಮವಾರ ತಡರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆದ್ರೆ ಸ್ವಗ್ರಾಮಕ್ಕೆ ತೆರಳಲು ಹಣವಿಲ್ಲದೆ ಕುಟುಂಬಸ್ಥರು ಪರದಾಡುತ್ತಿದ್ದರು. ಇದನ್ನು ನೋಡಿದ ಅಲ್ಲಿನ ಸ್ಥಳೀಯ ಮುಸ್ಲಿಮರು ಹಣ ಹೊಂದಿಸಿ ಶವವನ್ನು ಉತ್ತರ ಪ್ರದೇಶಕ್ಕೆ ರವಾನಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸ್ಥಳೀಯರು ಶಕ್ತಿರಾಮ್ ಕುಟುಂಬಕ್ಕೆ 73 ಸಾವಿರ ರೂಪಾಯಿ ಸಂಗ್ರಹಿಸಿದ್ದು, ಮೃತನ ಸ್ವಗೃಹ ಉತ್ತರ ಪ್ರದೇಶದ ಹರದೋಯಿ ಜಿಲ್ಲೆ ರಸೂಲ್ ಬ್ರಹ್ಮ ಗ್ರಾಮಕ್ಕೆ ಮೃತ ದೇಹವನ್ನು ಸಾಗಿಸಲು ಆಂಬುಲೆನ್ಸ್ ವೆಚ್ಚ ಹೊಂದಿಸಿ ಸಹಾಯ ಮಾಡಿದ್ದಾರೆ.