ರಾಯಚೂರು: ವಿಚಾರಣೆಗೆ ಕರೆದುಕೊಂಡು ಹೋಗುತ್ತಿದ್ದಾಗ ಕೊಲೆ ಆರೋಪಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿರುವ ಘಟನೆ ರಾಯಚೂರಿನ ಮಾನ್ವಿ ತಾಲೂಕಿನ ಅಮಿನಗಡದಲ್ಲಿ ನಡೆದಿದೆ.
ಆರೋಪಿ ಹುಚ್ಚಪ್ಪನ ಕಲ್ಲೇಟಿನಿಂದ ತಪ್ಪಿಸಿಕೊಂಡು ಆತನನ್ನು ಹೆದರಿಸಲು ಮಾನ್ವಿ ಸರ್ಕಲ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ್ರೂ ಆರೋಪಿ ಪರಾರಿಯಾಗಿದ್ದಾನೆ. ಹುಚ್ಚಪ್ಪ ಸಜ್ಜೆ ಹೊಲದಲ್ಲಿ ಓಡಿ ಹೋಗಿದ್ದರಿಂದ ಆರೋಪಿಯನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
2017 ಆಗಸ್ಟ್ 12 ರಂದು ಗ್ರಾಮದ 70 ವರ್ಷದ ಹುಲಿಗೆಮ್ಮ ಎಂಬ ವೃದ್ಧೆಯನ್ನ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಸಂಶಯದ ಮೇಲೆ ವೃದ್ಧೆಯ ತಂಗಿಯ ಮಗ ಆರೋಪಿ ಹುಚ್ಚಪ್ಪನನ್ನ ಕವಿತಾಳ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.
ವಿಚಾರಣೆ ಭಾಗವಾಗಿ ಗ್ರಾಮಕ್ಕೆ ಕರೆತಂದಾಗ ಹುಚ್ಚಪ್ಪ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಗಾಯಗೊಳಿಸಿದ್ದಾನೆ. ಆರೋಪಿ ಪರಾರಿಯಾದ ಹಿನ್ನೆಲೆಯಲ್ಲಿ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.