ಮುಂಬೈ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.
ಸ್ಥಳಿಯ ಮಾಧ್ಯಮಗಳ ವರದಿಗಳ ಪ್ರಕಾರ ಕೊಲೆಯಾದ ವ್ಯಕ್ತಿ ಸುಧೀರ್ ಪವಾರ್(24) ಎಂದು ಗುರುತಿಸಲಾಗಿದೆ. ಬಡಗಿ ವೃತ್ತಿ ಮಾಡಿಕೊಂಡಿದ್ದ ಸುಧೀರ್ ಬಾಂದ್ರಾ (ಪೂರ್ವ) ಪ್ರದೇಶದಲ್ಲಿ ನೆಲೆಸಿದ್ದ.
ಈತನ ನೆರೆಮನೆಯಲ್ಲಿ ವಾಸವಿದ್ದ ಕುಟುಂಬ ಸಹೋದರರಾದ ಚೋಟಾಲ್ ಸಹಾನಿ (34), ರಾಕೇಶ್ ಸಹಾನಿ (40) ತಮಗೇ ಒಂದು ಮರದ ಕಬೋರ್ಡ್ ಮಾಡಿಕೊಡುವಂತೆ ಕೇಳಿದ್ದಾರೆ. ಸಹೋದರರ ಮನವಿಯನ್ನು ಆತ ನಿರಾಕರಿಸಿದ್ದು ಮೂವರ ನಡುವೆ ಜಗಳಕ್ಕೆ ಆರಂಭವಾಗಿದೆ. ನಂತರ ಜಗಳ ವಿಕೋಪಕ್ಕೆ ತಿರುಗಿದ್ದು ಚೋಟಾಲ್ ಸ್ಥಳದಲ್ಲಿದ್ದ ಸುತ್ತಿಗೆಯಿಂದ ಪವಾರ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.
ಇದನ್ನು ಕಂಡು ಆತಂಕಗೊಂಡ ಚೋಟಾಲ್ ತಕ್ಷಣ ಪವಾರ್ ಕುಟುಂಬಸ್ಥರಿಗೆ ಆತ ಕಟ್ಟಡ ಮೇಲಿಂದ ಬಿದ್ದು ಗಾಯಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಪವಾರ್ ಸಹೋದರಿ ಸಾರ್ವಜನಿಕರ ಸಹಾಯದಿಂದ ಆತನನ್ನು ಸ್ಥಳೀಯ ಆಸ್ಪತ್ರೆ ಕೊಂಡ್ಯೊಯುವ ಪ್ರಯತ್ನ ನಡೆಸಿದ್ದು, ದಾರಿ ಮಧ್ಯದಲ್ಲಿಯೇ ಪವಾರ್ ಸಾವನ್ನಪ್ಪಿದ್ದಾನೆ.
ಸುಧೀರ್ ಪವಾರ್ ಜೊತೆ ಜಗಳವಾಡಿ ಆತನ ಕೊಲೆಗೆ ಕಾರಣರಾದ ಸಹೋದರು ಆತನ ಕುಟುಂಬಕ್ಕೆ ಮಾಹಿತಿ ನೀಡಿದ ನಂತರ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಸತ್ಯಾಂಶ ಬೆಳಕಿಗೆ ಬಂದಿದ್ದು ಪೊಲೀಸರು ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ.
ಘಟನೆಯ ಕುರಿತು ಮುಂಬೈನ ಖೇರ್ವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.