ಕೋಲಾರ: ಜನ ಒಗ್ಗಟ್ಟಾಗಿ ಮನಸು ಮಾಡಿದ್ರೆ ಏನ್ ಬೇಕಾದ್ರೂ ಸಾಧಿಸ್ತಾರೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಕೋಲಾರದ ಮುಳಬಾಗಿಲು ತಾಲೂಕಿನ ಪೂಜೇನಹಳ್ಳಿ, ಹಿರಣ್ಯ ಗೌಡೇನಹಳ್ಳಿ, ಜೆ.ಓಬೇನಹಳ್ಳಿಯ ಗ್ರಾಮಸ್ಥರು.
ಕೋಟ್ಯಾಂತರ ರೂಪಾಯಿ ರಿಲೀಸ್ ಆದ್ರೂ ಸದ್ಬಳಕೆ ಆಗದೆ, ಊರಿಗೆ ರಸ್ತೆ ಅನ್ನೋದೇ ಇರ್ಲಿಲ್ಲ. ಆದ್ರೆ, ಗ್ರಾಮದವರೆಲ್ಲಾ ಒಗ್ಗೂಡಿ ರಸ್ತೆ ಮಾಡಿದ್ದಾರೆ. ಬೈರಕೂರಿನವರೆಗೆ ಪಕ್ಕಾ ರಸ್ತೆ ಇದ್ದು, ಅಲ್ಲಿಂದ ಈ ಗ್ರಾಮಗಳಿಗೆ ಕಾಲುದಾರಿಯಂತಹ ರಸ್ತೆ ಇತ್ತು. ಹಲವು ವರ್ಷಗಳಿಂದ ಈ ಗ್ರಾಮಗಳಿಗೆ ರಸ್ತೆ ನಿರ್ಮಿಸಲು ಹಣ ಬಿಡುಗಡೆಯಾಗಿದ್ರೂ, ಪ್ರಭಾವಿಗಳು ಹಾಗೂ ಅಕ್ಕಪಕ್ಕದ ಜಮೀನಿನವರು ರಸ್ತೆ ನಿರ್ಮಾಣಕ್ಕೆ ಅಡ್ಡಗಾಲಾಗಿದ್ದರು.
ರಸ್ತೆ ಇಲ್ಲ ಅಂದ್ಮೇಲೆ ವಾಹನ ಸಂಚಾರ ಎಲ್ಲಿಂದ ಬಂತು. ಬಸ್, ಆಟೋ ಏನು ಬರ್ತಿರಲಿಲ್ಲ. ಶಾಲೆ, ಆಸ್ಪತ್ರೆಗೆ ಹೋಗ್ಬೇಕು ಅಂದರೆ ಜನ ಪರದಾಡ್ತಿದ್ರು. ಜನಪ್ರತಿನಿಧಿಗಳಿಗೆ ಮನವಿಕೊಟ್ರೂ ಪ್ರಯೋಜನ ಆಗ್ಲಿಲ್ಲ. ರೊಚ್ಚಿಗೆದ್ದ ಈ ಮೂರು ಗ್ರಾಮಗಳ ಗ್ರಾಮಸ್ಥರು ಮನೆಗೊಬ್ಬರಂತೆ ಮಕ್ಕಳು, ಮಹಿಳೆಯರಾದಿಯಾಗಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ್ರು.
ರಸ್ತೆ ಸಮತಟ್ಟಿಗೆ ಜೆಸಿಬಿ, ಟ್ರಾಕ್ಟರ್ಗಳನ್ನೂ ಬಳಸಿಕೊಂಡು ಸದ್ಯಕ್ಕೆ ಎರಡು ಕಿ.ಮೀ. ರಸ್ತೆಯನ್ನ ಅಚ್ಚುಕಟ್ಟಾಗಿ ಮಾಡಿದ್ದಾರೆ. ರಸ್ತೆ ನಿರ್ಮಾಣಕ್ಕೆ ಅಕ್ಕಪಕ್ಕದ ಜಮೀನಿನವರು ಮೊದಲಿಗೆ ವಿರೋಧ ವ್ಯಕ್ತಪಡಿಸಿದ್ರು. ಯಾವುದನ್ನೂ ಲೆಕ್ಕಿಸದ ಗ್ರಾಮಸ್ಥರು ಮೊದಲಿಗಿದ್ದ ಮೂರಡಿ ರಸ್ತೆಯನ್ನ ಈಗ ಐದು ಅಡಿಗೆ ಅಗಲೀಕರಣ ಮಾಡುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋದನ್ನ ತೋರಿಸಿದ್ದಾರೆ.
ನಾವೀಗ ಕಚ್ಚಾ ರಸ್ತೆ ಮಾಡಿಕೊಂಡಿದ್ದೇವೆ, ಜನಪ್ರತಿನಿಧಿಗಳೆನಿಸಿಕೊಂಡವರು ಇದಕ್ಕೆ ಡಾಂಬರ್ ಹಾಕಿ, ಪಕ್ಕಾ ರಸ್ತೆ ಮಾಡಿಕೊಡಲಿ ಅಂತ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
https://www.youtube.com/watch?v=c77lC9Unu7U