ಬೆಂಗಳೂರು : ವಿಶೇಷ ಕಥಾರಚನ ಕೌಶಲ್ಯ ತಮ್ಮ ಡೈಲಾಗ್, ಸಾಂಗ್ ಹೀಗೆ ಎಲ್ಲವುದರಲ್ಲಿಯೂ ಹೆಸರು ಮಾಡಿದವರು ಖ್ಯಾತ ನಿರ್ದೇಶಕ ಯೋಗರಾಜ್ ಭಟ್. ಇದೀಗ ‘ಮುಗುಳುನಗೆ’ ಚಿತ್ರದ ಮೂಲಕ ಮತ್ತೊಮ್ಮೆ ರಾಜ್ಯಾದ್ಯಂತ ಮುಗುಳುನಗೆ ಬೀರುತ್ತಿದ್ದಾರೆ. ಮುಂಗಾರುಮಳೆ ಚಿತ್ರದ ನಂತರ ದಶಕಗಳೇ ಕಳೆದು ಮತ್ತೊಮ್ಮೆ ಒಂದಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ರ ಜೋಡಿ ತೆರೆ ಮೇಲೆ ಮೋಡಿ ಮಾಡಿದೆ.
ಇದೀಗ ಚಿತ್ರ ಬಿಡುಗಡೆಯಾಗಿ ಕೆಲವೇ ದಿನಗಳಷ್ಟೇ ಸಂದಿರುವಾಗ ಚಿತ್ರಮಂದಿರಗಳಲ್ಲಿ ಸಿನಿರಸಿಕರು ತುಂಬಿ ತುಳುಕುತ್ತಿರುವುದು ಚಿತ್ರತಂಡಕ್ಕೆ ಅತೀವ ಸಂತಸ ತಂದಿದೆ. ರಾಜ್ಯದ ಎಲ್ಲಾ ಚಿತ್ರಮಂದಿರಗಳೂ ಹೌಸ್ ಫುಲ್ ಆಗುತ್ತಿದ್ದು, ಗಣೇಶ್ ರವರ ಪ್ರಬುದ್ಧ ನಟನೆ ಹಿರಿಕಿರಿಯರೆನ್ನದೇ ಎಲ್ಲರನ್ನೂ ಮೋಡಿ ಮಾಡುತ್ತಿದೆ.
ಸಾಮಾನ್ಯವಾಗಿ ಮನೆಯ ಧಾರಾವಾಹಿಗಳಿಗೆ ಸ್ಟಿಕ್ ಆಗಿರುವ ಮಹಿಳಾಮಣಿಗಳು ‘ಮುಗುಳುನಗೆ’ಯ ಝಲಕ್ ನೋಡಲು ಅರ್ಧ ಚಿತ್ರಮಂದಿರವನ್ನು ತುಂಬುತ್ತಿರುವುದು ಚಿತ್ರ ನಿರ್ಮಾಣ ಮಾಡಿದ ಸೈಯದ್ ಸಲಾಂ ರವರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.
ಚಿತ್ರದ ‘ಹೊಡಿ ಒಂಬತ್ತು’ ಹಾಡೊಂದೇ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಎರಡು ಲಕ್ಷ ವ್ಯೂವ್ಸ್ ಪಡೆದು ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ ಕೇವಲ ಒಂದು ತಿಂಗಳಿನಲ್ಲಿ5 ಲಕ್ಷ ವ್ಯೂವ್ ಗಳನ್ನು ದಾಟಿದೆ. ಚಿತ್ರದ ಇನ್ನಿತರ ಹಾಡುಗಳೂ ಜನಮನ ಸೂರೆಗೊಂಡಿದೆ. ವಿ.ಹರಿಕೃಷ್ಣ ಸಂಗೀತ ನೀಡಿರುವ ಚಿತ್ರದ ಹಾಡುಗಳಿಗಾಗಿಯೇ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬೀಳುತ್ತಿರುವ ದೃಶ್ಯ ಎಲ್ಲೆಡೆ ಸರ್ವೇಸಾಮಾನ್ಯವಾಗಿದೆ.
ಹಾಗಾಗಿ ಜಾಕ್ ಮಂಜುರವರ ಮೈಸೂರು ಟಾಕೀಸ್ ಸಂಸ್ಥೆ ವಿತರಿಸುತ್ತಿರುವ ಈ ಚಿತ್ರ ಯಶಸ್ವೀ 25ನೇ ದಿನದತ್ತ ಮುನ್ನುಗ್ಗುತ್ತಿದ್ದು, ಚಿತ್ರ ನೂರು ಮೀರಿದ ದಿನಗಳನ್ನು ಕಾಣುವಂತಾಗಲಿ ಎನ್ನುವುದು ಕನ್ನಡ ಸಿನಿರಸಿಕರ ಹಾಗೂ ಗಣೇಶ್ ಅಭಿಮಾನಿಗಳ ಆಶಯವಾಗಿದೆ.