ಉಡುಪಿ: ಮೈಸೂರಿನಲ್ಲಿ ನೆಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಗ್ರೆಸ್ ಮಯವಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಕಾಂಗ್ರೆಸ್ ಗೆ ಮತ ಹಾಕಬೇಕೆಂದು ಘೋಷಣೆ ಕೂಗಿರೋದು ದುರಂತ ಅಂತ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ನಗರದಲ್ಲಿ ನಡೆಯುತ್ತಿರೋ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನ ಕನ್ನಡಿಗರ ಸಮ್ಮೇಳನವಾಗಿ ಉಳಿದಿಲ್ಲ. ಕನ್ನಡಿಗರ ಬಗ್ಗೆ ಚರ್ಚೆಯಾಗದೇ ಬಿಜೆಪಿಯನ್ನು ವಿರೋಧ ಮಾಡುವ ಕಡೆ ಚರ್ಚೆಯಾಗುತ್ತಿರುವುದು ನಮ್ಮೆಲ್ಲರ ದುರಂತ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕೇವಲ ಎಡಪಂಥಿಯರಿಗೆ ಮಣೆ ಹಾಕುವ ಕೆಲಸವಾಗುತ್ತಿದೆ. ಯಾರು ಅವರ ಕಿವಿ ಕಚ್ಚುತ್ತಿದ್ದಾರೋ, ಯಾರೂ ಹಿಂದು ವಿರೋಧಿ ಭಾವನೆ ಹೊಂದಿದ್ದಾರೋ ಅವರನ್ನು ಮಾತ್ರ ಸಾಹಿತ್ಯ ಸಮ್ಮೇಳನಕ್ಕೆ ಕರೆಯಲಾಗಿದೆ. ಅವರಿಗೆ ಕಮಿಟಿಯಲ್ಲಿ ಹಾಗೂ ಆಯೋಗದಲ್ಲಿ ಸ್ಥಾನ ನೀಡಲಾಗುತ್ತಿದೆ ಎಂದು ಟೀಕಿಸಿದ್ರು.
ಚಂಪಾ ಹೇಳಿದ್ದು ಏನು?: ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಸ್ವಾತಂತ್ರ್ಯ, ಸಮಾನತೆ, ಸಹಭಾವ, ಸೆಕ್ಯುಲರಿಸಂ, ಸಾಮಾಜಿಕ ನ್ಯಾಯ ಮುಂತಾದವುಗಳಿಗೆ ಕಂಟಕ ಒದಗಿಬಂದಿದೆ ಎಂಬ ಆತಂಕ ವ್ಯಕ್ತಪಡಿಸಿದ್ರು. ಅಲ್ಲದೇ ನಮ್ಮ ರಾಜ್ಯದ ಹಿತಾಸಕ್ತಿಗಳ ಸಂರಕ್ಷಣೆಗಾಗಿ ಸೆಕ್ಯುಲರ್ ಪಕ್ಷಗಳ ಪರವಾಗಿ ಮತಚಲಾಯಿಸಬೇಕು ಎಂದು ಮನವಿ ಮಾಡಿದ್ದರು.
ಒಂದು ರಾಷ್ಟ್ರೀಯ ಪಕ್ಷ ಕನ್ನಡದ ಪರ ಕೆಲಸ ಮಾಡುತ್ತಿದೆ. ಆದರೆ, ಇನ್ನೊಂದು ರಾಷ್ಟ್ರೀಯ ಪಕ್ಷವು ನಾಡಧ್ವಜ ವಿವಾದ, ಮೆಟ್ರೋದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಧ್ವನಿಯೆತ್ತುತ್ತಿ ಮೌನ ತಾಳಿದೆ. ಈ ಚುನಾವಣೆಯಲ್ಲಿ ಆ ಪಕ್ಷವನ್ನು ಜನ ದೂರವಿಡಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಗೆ ಮತ ಹಾಕುವಂತೆ ನೆರೆದಿದ್ದ ಜನತೆಗೆ ಕರೆಕೊಟ್ಟಿದ್ದರು.
ಕನ್ನಡ ಸಂಸ್ಕೃತಿಗೆ ಸಂಸ್ಕೃತ, ಹಿಂದಿ, ಇಂಗ್ಲಿಷ್ ಕಡುವೈರಿಯಾಗಲು ಕೇಂದ್ರ ಸರಕಾರದ ನೀತಿಯೇ ಕಾರಣವಾಗಿದೆ. ಒಂದೇ ಭಾಷೆ-ಒಂದೇ, ಧರ್ಮ-ಒಂದೇ ಸಿದ್ಧಾಂತ ಎಂಬ ಧಾಟಿಯಲ್ಲಿ ನಾವೆಲ್ಲ ಒಕ್ಕೊರಲಿನಿಂದ ಹಾಡುತ್ತಿದ್ದ ವಂದೇಮಾತರಂ ಗೀತೆಯನ್ನೇ ಹೈಜಾಕ್ ಮಾಡಲಾಗಿದೆ. ಭಾರತ ಮಾತೆ, ಬರೀ ಹಿಂದೂ ಮಾತೆ ಆಗುತ್ತಿರುವಳೇ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಶ್ನೆ ಮಾಡುವುದೇ ರಾಷ್ಟ್ರದ್ರೋಹವಾಗಿ, ವೈಚಾರಿಕತೆ ಮೇಲೆ ಹಲ್ಲೆ ಎಸಗುವುದೇ ಸಂಸ್ಕೃತಿಯಾಗಿ, ದಟ್ಟ ಭಯ ಆವರಿಸಿದೆ ಎಂದಿದ್ದರು.