ಬೆಂಗಳೂರು: ನಮ್ಮ ನೆನಪೇ ಪಕ್ಷದ ನಾಯಕರಿಗೆ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಒಬ್ಬ ಸಂಸದನಿದ್ದೇನೆ ಎಂಬ ವಿಚಾರವನ್ನೇ ಮರೆತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು ಬಿಬಿಎಂಪಿ ಮೇಯರ್ ಆಯ್ಕೆಯ ವಿಚಾರವಾಗಿ ಚರ್ಚೆ ನಡೆಸಲು ಕರೆದಿದ್ದ ಸಭೆಗೆ ತಮಗೇ ಆಹ್ವಾನ ನೀಡದಿರುವ ಕುರಿತು ಮಾತನಾಡಿದ ಸುರೇಶ್, ಈ ಸುದ್ದಿಗೋಷ್ಠಿಯನ್ನು ಬಂಡಾಯ ಪತ್ರಿಕಾಗೋಷ್ಠಿ ಅಂದರೂ ಯಾವುದೇ ತೊಂದರೆ ಇಲ್ಲ. ಬೆಂಗಳೂರು ಮೇಯರ್ ಚುನಾವಣೆ ಇದೇ ತಿಂಗಳ 26 ರಂದು ನಡೆಯಲಿದ್ದು, ಪ್ರಬಲ ನಾಯಕರೇ ಮೇಯರ್ ಆಗ್ತಾರೆ. ಆದರೆ ಬೆಂಗಳೂರು ವ್ಯಾಪ್ತಿಯಲ್ಲಿ ಹೊಸದಾಗಿ ಸೇರಿರುವ ಹಲವು ವಾರ್ಡ್ಗಳಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆದಿಲ್ಲ. ಸರ್ಕಾರ ಹಾಗೂ ಎಲ್ಲಾ ಮೇಯರ್ಗಳು ಈ ವಾರ್ಡ್ಗಳ ಅಭಿವೃದ್ಧಿಯನ್ನು ಮರೆತಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿಯೇ ಇಂತಹ ಹಲವು ವಾರ್ಡ್ಗಳಿವೆ ಎಂದು ಸರ್ಕಾರದ ನಿರ್ಲಕ್ಷದ ವಿರುದ್ಧ ಹಾರಿಯ್ದರು.
ಮೇಯರ್ ಚುನಾವಣೆಯ ಬಗ್ಗೆ ನಮಗೇ ಜವಾಬ್ದಾರಿಯನ್ನು ವಹಿಸಿದರೆ ನಾವೇ ಸ್ವತಃ ಜೆಡಿಎಸ್ ನಾಯಕರೊಂದಿಗೆ ಮಾತಾನಾಡುತ್ತೇವೆ. ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಬೆಂಗಳೂರು ಹೊರ ವಲಯದ ಕಾರ್ಪೊರೇಟರ್ ಗಳಿಗೆ ಹುದ್ದೆಯನ್ನು ನೀಡಬೇಕು. ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ವೇಲು ನಾಯಕ್ ಹಾಗೂ ಅಂಜನಪ್ಪ ಇಬ್ಬರಲ್ಲಿ ಒಬ್ಬರನ್ನು ಮೇಯರ್ ಮಾಡಬೇಕು. ಈ ವಿಚಾರವಾಗಿ ಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರನ್ನು ಒತ್ತಾಯ ಮಾಡುತ್ತೇವೆ ಎಂದರು.
ನನ್ನ ಸಹೋದರ ಶಿವಕುಮಾರ್ ಸಂಪತ್ ರಾಜುಗೆ ಮೇಯರ್ ಆಗಲು ಬೆಂಬಲ ನೀಡಬಹುದು ಆದರೆ ನಾನು ನನ್ನ ಕ್ಷೇತ್ರದ ಕಾರ್ಪೊರೇಟರ್ಗಳಿಗೆ ಬೆಂಬಲ ನೀಡುತ್ತೇನೆ. ಅತ್ತರೆ ಹಾಲು ಕುಡಿಸುತ್ತಾರೆ ಎಂಬ ಮಾತಿದೆ. ಹಾಗೆಯೇ ನಾವಾಗೆ ಕೇಳದಿದ್ದರೆ ಅವರು ನಮ್ಮನ್ನು ಗಮನಿಸುವುದಿಲ್ಲ. ನನ್ನ ಸಹನೆ ಕಟ್ಟೆ ಒಡೆಯುತ್ತದೆ. ಮುಂದಿನ ದಿನಗಳಲ್ಲಿ ಅದು ದೊಡ್ಡದಾಗಬಹುದು ಎಂದು ಎಚ್ಚರಿಸಿದರು.
ನನ್ನ ನಾಯಕರಾದ ಸಂಸದ ಡಿ.ಕೆ.ಸುರೇಶ್ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ. ಸುರೇಶ್ ಅವರ ಬೇಡಿಕೆ ನ್ಯಾಯಯುತವಾಗಿದೆ ಎಂದು ಶಾಸಕ ಮುನಿರತ್ನ ಹೇಳಿದರು.