ರಾಮನಗರ: ಗಂಡನ ಅನಾರೋಗ್ಯದಿಂದ ಬೇಸತ್ತ ಪತ್ನಿ ತನ್ನ ಮಕ್ಕಳ ಜೊತೆ ಮನೆಯ ಎದುರಿನ ನೀರಿನ ಸಂಪ್ ನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಅಪ್ಪಗೆರೆ ಗ್ರಾಮದಲ್ಲಿ ನಡೆದಿದೆ.
ರೇಖಾ (28), ಮಕ್ಕಳಾದ ನೂತನ್ (7) ಮತ್ತು ಮಾನ್ಯ (4) ಮೃತ ದುರ್ದೈವಿಗಳು. ಮೊದಲು ತಾಯಿ ರೇಖಾ ತನ್ನ ಮಕ್ಕಳನ್ನು ನೀರಿನ ಸಂಪ್ ನಲ್ಲಿ ಮುಳುಗಿಸಿ ಕೊನೆಗೆ ತಾವು ನೀರಿನ ಸಂಪ್ ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ನವೀನ್ ಅವರಿಗೆ ಲಿವರ್ ಜಾಂಡೀಸ್ ಇದ್ದು ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಲಾಗಿತ್ತು.
ಗಂಡನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು ಗುಣಮುಖವಾಗಿರಲಿಲ್ಲ. ಹೀಗಾಗಿ ಮುಂದೆ ಪತಿ ಸಾಯಬಹುದು ಅವರ ಅಗಲಿಕೆಯಿಂದ ಜೀವನ ಸಾಗಿಸುವುದು ಕಷ್ಟ ಅಂತ ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.