ರಾಮನಗರ: ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕೆ. ಗೊಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಳೆಊರು ಗ್ರಾಮದವರಾದ ವೇಣು(25) ಹಾಗೂ ದಿವ್ಯಾ(22) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಇವರಿಬ್ಬರು 4 ವರ್ಷಗಳಿಂದ ಪ್ರೀತಿಸುತ್ತಿದ್ದು, ಈ ಬಗ್ಗೆ ಮನೆಯವರಿಗೆ ವಿಚಾರ ಗೊತ್ತಾಗಿತ್ತು. ಆದರೆ ಎರಡು ಮನೆಯವರು ಇವರ ಪ್ರೀತಿಗೆ ನಿರಾಕರಿಸಿದ್ದಾರೆ. ಅಲ್ಲದೇ ಜಗಳ, ಗಲಾಟೆಗಳು ಕೂಡ ನಡೆದಿವೆ.
ಗಲಾಟೆ ನಡೆದಿದ್ದರಿಂದ ಭಯಗೊಂಡು ವೇಣು ಮತ್ತು ದಿವ್ಯಾ ಮದುವೆಯಾಗಲು ಶುಕ್ರವಾರ ಕಗ್ಗಲಿಪುರದ ಶಶಿ ಎಂಬ ಸ್ನೇಹಿತನ ಮನೆಗೆ ಹೋಗಿದ್ದು, ಅಲ್ಲೇ ತಂಗಿದ್ದಾರೆ. ಮಗಳು ಓಡಿ ಹೋದ ವಿಚಾರ ತಿಳಿದ ದಿವ್ಯ ತಾಯಿ ಶಾಂತಮ್ಮ ಶನಿವಾರ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇತ್ತ ತಾಯಿಯ ಸಾವಿನ ಸುದ್ದಿ ಕೇಳಿ ಭಯಗೊಂಡ ಪ್ರೇಮಿಗಳು ಭಾನುವಾರ ಸಂಜೆ ಒಟ್ಟಿಗೆ ನೇಣಿಗೆ ಶರಣಾಗಿದ್ದಾರೆ.
ಈ ಘಟನೆ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.