ಉಡುಪಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಭಾಷಣ ಮಾಡಲಿದ್ದಾರೆ.
ದಿಢೀರ್ ಕಾರ್ಯಕ್ರಮ ಫಿಕ್ಸಾಯ್ತಾ? ಸದ್ದಿಲ್ಲದೆಯೇ ಮೋದಿ ಉಡುಪಿಗೆ ಬರ್ತಿದ್ದಾರಾ? ಅಂತ ಶಾಕ್ ಆಗ್ಬೇಡಿ. ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಜಗದ್ಗುರು ಶ್ರೀ ಮಧ್ವಾಚಾರ್ಯರ ಸಪ್ತ ಶತಮಾನೋತ್ಸವದ ಪ್ರಯುಕ್ತ ಫೆ.5ರ ರವಿವಾರ ಸಂಜೆ 5:30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸ್ ಮಾಡಲಿದ್ದಾರೆ.
ಮಠದ ರಾಜಾಂಗಣದಲ್ಲಿ ನಡೆಯುವ ಧಾರ್ಮಿಕ ಸಭೆಯನ್ನುದ್ದೇಶಿಸಿ ನೇರ ವೀಡಿಯೋ ಕಾನ್ಫರೆನ್ಸ್ ಮೂಲಕ ಸುಮಾರು ಒಂದು ಗಂಟೆಗಳ ಕಾಲ ಮೋದಿ ಭಾಷಣ ಮಾಡಲಿದ್ದಾರೆ.ಮಧ್ವಾಚಾರ್ಯರ 700 ವರ್ಷಗಳ ಜನ್ಮ ಉತ್ಸವದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬೃಹತ್ ಸ್ಕ್ರೀನ್ ಮೂಲಕ ಮೋದಿ ಭಾಷಣ ವೀಕ್ಷಿಸುವ ಅವಕಾಶವಿದೆ.
ಆಸಕ್ತರು ಸಭೆಯಲ್ಲಿ ಭಾಗವಹಿಸುವಂತೆ ಶ್ರೀಮಧ್ವ ಸಪ್ತ ಶತಮಾನೋತ್ಸವ ಸ್ವಾಗತ ಸಮಿತಿ ಹಾಗೂ ಶ್ರೀಕೃಷ್ಣ ಮಠದ ದಿವಾನರರು ಮನವಿ ಮಾಡಿದ್ದಾರೆ.