ಬೆಂಗಳೂರು: ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಮಹದಾಯಿ ವಿಚಾರದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ.
ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಕರ್ನಾಟಕದ ಜನತೆಯನ್ನು ಉದ್ದೇಶಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಕಾಂಗ್ರೆಸ್ ಮತ್ತು ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ್ರು.
ಇಡೀ ದೇಶವೇ ಇಂದು ನೋಡುತ್ತಿದೆ, ಎಲ್ಲರೂ ಬದಲಾವಣೆಯನ್ನು ಬಯಸುತ್ತಿದ್ದಾರೆ. ನಾನು ಈ ಹಿಂದೆಯೂ ಹಲವು ಬಾರಿ ಬೆಂಗಳೂರಿಗೆ ಬಂದಿದ್ದೇನೆ. ಆದ್ರೆ ಇಂದು ಸೇರಿದ ಜನ ಸಮೂಹವನ್ನು ನಾನೆಂದಿಗೂ ನೋಡಿಲ್ಲ. ನಿಮ್ಮೆಲ್ಲರನ್ನು ನೋಡಿದ್ರೆ ಕರ್ನಾಟಕದಕಲ್ಲಿ ಕಾಂಗ್ರೆಸ್ನ ಕೊನೆ ಗಳಿಗೆಯಲ್ಲಿ ನಿಂತಿದೆ. ಕರ್ನಾಟಕದ ಜನತೆಗೆ ಕಾಂಗ್ರೆಸ್ ಸರ್ಕಾರ ಬೇಕಾಗಿಲ್ಲ. ಸಿದ್ದರಾಮಯ್ಯ ಸರ್ಕಾರದ ಕೌಂಟ್ ಡೌನ್ ಆರಂಭವಾಗಿದೆ ಅಂತ ಹೇಳಿದ್ರು.
ಬಿಜೆಪಿ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ತತ್ವದಡಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮಾತ್ರ ಸರ್ವರ ಪ್ರಗತಿ ಆಗಲಿದೆ. 21ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಬದಲಾವಣೆ ತರಲಿದೆ. ಶ್ರೀಮಂತರಿಗೆ ಸೌಲಭ್ಯಗಳು ಸಿಗುವುದು ಸರಳವಾಗಿದೆ. ಆದ್ರೆ ನಾವು ಬಡವರಿಗೆ ಸೌಲಭ್ಯ ನೀಡುವಲ್ಲಿ ನಿರತವಾಗಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ. 1 ಕೋಟಿ ಕರ್ನಾಟಕ ಜನರಿಗೆ ಭೀಮಾ ಯೋಜನೆ ಲಾಭ ಲಭಿಸಿದೆ. 8 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಸೌಲಭ್ಯ ದೊರೆತಿದೆ ಅಂದ್ರು.
ಒಟ್ಟಿನಲ್ಲಿ ಮೋದಿ ಆಗಮನಕ್ಕೂ ಮುನ್ನ ಕನ್ನಡ ಪರ ಸಂಘಟನೆಗಳು ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸುವಂತೆ ಧರಣಿ ನಡೆಸಿರುವುದರಿಂದ ಯಾವುದೇ ಫಲಪ್ರದವಾಗಿಲ್ಲ ಅಂತಾನೇ ಹೇಳಬಹುದು. ಮೋದಿ ಅವರು ಬೆಂಗಳೂರು ಬರುತ್ತಿದ್ದಂತೆಯೇ ಇತ್ತ ಮಹದಾಯಿ ಹೋರಾಟಗಾರರು ಮೋದಿಯವರ ಫೋಟೋಗೆ ಹೂ ಹಾಕಿದ್ದರು. `ಗೆಟ್ ವೆಲ್ ಸೂನ್ ಮೋದಿ ಜಿ ಅಂತಾ ಭಾವಚಿತ್ರ ದ ಮೇಲೆ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದರು. ಆದ್ರೆ ಇದೀಗ ಮೋದಿಯವರು ಮಹದಾಯಿ ವಿಚಾರ ಸಂಬಂಧಿಸಿದಂತೆ ತುಟಿ ಬಿಚ್ಚದೇ ಇರುವುದು ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.