ಬೆಂಗಳೂರು: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ದೊಡ್ಡ ಬದಲಾವಣೆಯಾಗಿದೆ. ದೇಶಕ್ಕೆ ಸ್ಥಿರ ಸರ್ಕಾರ ಸಿಕ್ಕಿದೆ. ಹೀಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದಕ್ಕೆ ನನ್ನನ್ನು ನಾನು ಸಮರ್ಪಿಸಿಕೊಳ್ಳುತ್ತೇನೆ ಅಂತಾ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್ಎಂ ಕೃಷ್ಣ ಹೇಳಿದ್ದಾರೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿಯವರ ಶಕ್ತಿಶಾಲಿ ಆಡಳಿತವನ್ನು ಇಡೀ ಜಗತ್ತು ಗುರುತಿಸಿದೆ. ಅಲ್ಲದೇ ಅವರು ವಿಶ್ವದ ಅಗ್ರ ನಾಯಕರ ಸ್ಥಾನದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಏನು ಬೇಕಾದ್ರೂ ನಡೆಯಬಹುದು. ಕಾಂಗ್ರೆಸ್-ಜೆಡಿಎಸ್ ಒಂದಾದ್ರೂ ಅದನ್ನ ಎದುರಿಸಲು ಬಿಜೆಪಿ ಶಕ್ತವಾಗಿದೆ. ಉಪಚುನಾವಣೆಯಲ್ಲಿ ಬಿಜೆಪಿ ಸೋತಿರಬಹುದು. ಆದ್ರೆ ಅದು ಮುಂದಿನ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ ಆಗೋದಿಲ್ಲ ಅಂತಾ ಭವಿಷ್ಯ ನುಡಿದ್ರು.
ಇದೇ ಸಂದರ್ಭದಲ್ಲಿ ಬಿಜೆಪಿಯಲ್ಲಿನ ಹಿರಿಯ ನಾಯಕರ ಕಿತ್ತಾಟದ ಕುರಿತು ಮಾತನಾಡಿದ ಎಸ್ಎಂಕೆ, ನಾನು ಬಿಜೆಪಿಗೆ ಹೊಸದಾಗಿ ಬಂದಿದ್ದೇನೆ. ನಾನು ಪಕ್ಷದ ವಿನಮ್ರ ಕಾರ್ಯಕರ್ತ. ಹೀಗಾಗಿ ಅವರ ಈ ಜಂಜಾಟದಲ್ಲಿ ನನ್ನನ್ನು ಎಳೆಯಬೇಡಿ. ಬೆಕ್ಕಿಗೆ ಗಂಟೆ ಕಟ್ಟುವ ಕೆಲಸ ನನ್ನದಲ್ಲ ಅಂತಾ ತಿಳಿಸಿದ್ರು.
ನನ್ನ ಹುಟ್ಟುಹಬ್ಬದ ಈ ದಿನದಂದು ನಾನು ಇತ್ತೀಚೆಗಷ್ಟೇ ಸೇರಿದ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಬಂದು ಶುಭಾಶಯ ಕೊರುತ್ತಿದ್ದಾರೆ. ಸಾಮಾನ್ಯವಾಗಿ ನಾನು ಹುಟ್ಟಿದ ದಿನದಂದು ಬೆಂಗಳೂರಿನಲ್ಲಿ ಇರುತ್ತಿಲ್ಲ. ಆದ್ರೆ ರಾಜಕೀಯದ ಸ್ಥಿತ್ಯಂತರದಿಂದ ಈ ಬಾರಿ ಬೆಂಗಳೂರಿನಲ್ಲಿರಬೇಕಾಯ್ತು ಎಂದರು.
85ನೇ ವಸಂತಕ್ಕೆ ಕಾಲಿಟ್ಟ ಎಸ್ಎಂಕೆ ಇಂದು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ನಗರದ ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭೀಕರ ಬರಗಾಲದಿಂದ ತತ್ತರಿಸಿರುವ ನಾಡಿಗೆ ಉತ್ತಮ ಮಳೆಯಾಗಲಿ. ರಾಜ್ಯದ ಜನರಲ್ಲಿ ಹರ್ಷತರಲೆಂದು ಪ್ರಾರ್ಥಿಸಿದರು. ಈ ವೇಳೆ ಎಸ್ಎಂಕೆ ದಂಪತಿಗೆ ಶಾಸಕ ಅಶ್ವಥನಾರಾಯಣ್ ಸಾಥ್ ನೀಡಿದ್ರು.