ಕೊಪ್ಪಳ: ಮರ್ಯಾದ ಪುರುಷೋತ್ತಮ ಶ್ರೀರಾಮನ ಹೆಸರಿನಲ್ಲಿ ಕೊಲೆ ಸುಲಿಗೆ ನಡೆಯುತ್ತಿದೆ. ಶ್ರೀರಾಮನ ಹೆಸರಿನಲ್ಲಿ ವಿಷಬೀಜ ಬಿತ್ತಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ನಡೆದ ಮುಸ್ಲಿಂ ವರ್ತಮಾನ ಸವಾಲುಗಳು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಶ್ರೀರಾಮನ ಪೂಜೆ ಮಾಡುತ್ತಾರೆ. ಆದರೆ ಹೊರಗೆ ಅದೇ ಶ್ರೀರಾಮನ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶ್ರೀರಾಮ್ ಹೆಸರಲ್ಲಿ ವಿಷಬೀಜ ಬಿತ್ತನೆ ಮಾಡುವ ಕೆಲಸ ನಡೆಯುತ್ತಿದ್ದು, ನಮ್ಮ ಯುವಕರನ್ನು ಜೈಲಿಗೆ ಹೋಗಬೇಕೆಂದು ಕುಮ್ಮಕ್ಕು ಕೊಡುತ್ತಿದ್ದಾರೆ. ಪ್ರಧಾನಮಂತ್ರಿ ಮೋದಿ ಬಂದ ಮೇಲೆ ಇದು ಹೆಚ್ಚಾಗಿದೆ. ಅವರಿಗೆ ಸಂವಿಧಾನ, ಕಾನೂನು ಇಲ್ಲ. ನಮಗೆ ಇರುವ ದೇಶಾಭಿಮಾನ, ಅವರಿಗೆ ಇಲ್ಲ ಎಂದು ಕಿಡಿ ಕಾರಿದ್ದಾರೆ.