ಧಾರವಾಡ: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಸುವ ವೇಳೆ ನನ್ನ ಹೆಸರು ಯು.ಟಿ.ಖಾದರ್ ಎಂದು ಹೇಳಿದ ತಕ್ಷಣ ಒಂದು ಸಾರಿ ಅಲ್ಲ, ಬದಲಾಗಿ ಎರಡು ಸಾರಿ ತಪಾಸಣೆ ಮಾಡಲಾಗುತ್ತೆ ಎಂದು ವಿವಾದತ್ಮಕ ಹೇಳಿಕೆ ನೀಡಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಯು.ಟಿ. ಖಾದರ್ ಕ್ಷಮೆ ಕೇಳಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಗೆ ಸ್ಪಷ್ಟನೆ ನೀಡಿದ ಯು.ಟಿ.ಖಾದರ್ ಅವರು, ನನ್ನ ಹೇಳಿಕೆಯನ್ನು ತಪ್ಪಾಗಿ ಆರ್ಥೈಸಲಾಗುತ್ತಿದೆ. ಸಾಮಾಜದಲ್ಲಿ ಉತ್ತಮ ಸೇವೆ ಮಾಡಿ ಜನರ ನಡುವೆ, ಪ್ರೀತಿ ವಿಶ್ವಾಸದಿಂದ ಕಾರ್ಯನಿರ್ವಹಿಸಲು ಹೇಳಿದ್ದೇನೆ. ಎಲ್ಲರ ವಿಶ್ವಾಸವನ್ನು ಗಳಿಸಿದ ವೇಳೆ ನಮ್ಮನ್ನು ಜಾತಿ ಧರ್ಮ ಆಧಾರದಲ್ಲಿ ಗುರುತಿಸುವುದಿಲ್ಲ. ಈ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದೆ ಅಷ್ಟೇ, ಒಂದು ವೇಳೆ ನನ್ನ ಹೇಳಿಕೆ ನಿಮ್ಮ ಪ್ರಕಾರ ತಪ್ಪಾಗಿದ್ದಾರೆ ಕ್ಷಮೆ ಕೇಳುತ್ತೇನೆ ಎಂದರು.
ಯು.ಟಿ.ಖಾದರ್ ಹೇಳಿದ್ದೇನು?: ಧಾರವಾಡದ ಕಲಾಭವನದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಖಾದರ್ ಎಂದು ಹೇಳಿದ ತಕ್ಷಣ ವಿಮಾನ ನಿಲ್ದಾಣದಲ್ಲಿ ಒಂದು ಸಾರಿ ಅಲ್ಲ, ಬದಲಾಗಿ ಎರಡು ಸಾರಿ ತಪಾಸಣೆ ಮಾಡಲಾಗುತ್ತದೆ. ಈ ರೀತಿಯಾದರೂ ನಾವು ಏನು ಮಾಡೊಕೆ ಆಗಲ್ಲ, ತಾಳ್ಮೆಯಿಂದ ಇರಲೇಬೇಕಾಗುತ್ತೆ. ಇನ್ನು ಯಾಕೆ ಎರಡು ಸಾರಿ ತಪಾಸಣೆ ಮಾಡಿದರು ಎಂದು ಕೇಳುವುದಕ್ಕೆ ಕೂಡಾ ಆಗದ ಸ್ಥಿತಿ ಬಂದಿದೆ. ಮುಸ್ಲಿಂರಿಗೆ ಸರ್ಕಾರಿ ಕ್ಷೇತ್ರ ಹಾಗೂ ಇತರೆ ಕಡೆ ಕೆಲಸ ನಿರ್ವಹಿಸಲು ಸ್ವಲ್ಪ ಜಾಸ್ತಿನೇ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಮನಗೆ ಕೆಲಸ ನಿರ್ವಹಿಸುವಾಗ ಅಡಚಣೆ ಬಂದಾಗ ನಾವು ತಾಳ್ಮೆಯನ್ನು ಪ್ರದರ್ಶಿಸಬೇಕು. ತಾಳ್ಮೆಯೇ ನಮ್ಮ ಆಸ್ತ್ರ. ಇಂತಹ ಘಟನೆಗಳನ್ನು ಮೀರಿ ಬರುವ ಶಕ್ತಿ ನಿಮಗಿದ್ದು, ಅದನ್ನು ಮೀರಿ ಬರುವಂತ ಕೆಲಸ ಇಂದು ಆಗಬೇಕಿದೆ. ಅಧಿಕಾರಿಗಳು ಸಹ ಎಲ್ಲಾ ಕಷ್ಟಗಳನ್ನು ಅನುಭವಿಸಿ ತಮ್ಮ ಕೆಲಸ ಮಾಡುತ್ತಾರೆ. ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಯಾಗಿರಲಿ ನಾವು ಜನರೊಂದಿಗೆ ಪ್ರೀತಿ ಪೂರ್ವಕವಾಗಿ ಇರಬೇಕು ಎಂದು ಯು.ಟಿ.ಖಾದರ್ ಹೇಳಿದ್ದರು.