ಬೆಂಗಳೂರು: ರಾಷ್ಟ್ರ ರಾಜಕೀಯದಲ್ಲಿ ಮಿಂಚಿನ ಸಂಚಲನ ನಡೆಯುತ್ತಿದೆ. ಇಂದು ದೆಹಲಿಗೆ ಬರಬಹುದೇ ಎಂದು ದೇವೇಗೌಡ್ರಿಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಆಹ್ವಾನ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೂಚನೆ ಮೇರೆಗೆ ದೇವೇಗೌಡರಿಗೆ ಕರೆ ಮಾಡಿದ ಸುಷ್ಮಾ ಸ್ವರಾಜ್, ಗೌಡರ ಜೊತೆ ಆರಂಭದಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದು, ಚೆನ್ನಾಗಿದ್ದೀರಾ, ಆರೋಗ್ಯ ಹೇಗಿದೆ? ಈಗ ದೆಹಲಿಗೆ ಬರಬಹುದಾ? ಎಂದು ಕೇಳಿದ್ದಾರೆ. ಬಳಿಕ ನಿಮ್ಮ ಸಲಹೆ ಬೇಕಿದೆ ಎಂದು ದೇವೇಗೌಡರಲ್ಲಿ ಮನವಿ ಮಾಡಿದ್ದು, ಚೀನಾ ಭಾರತ ಗಡಿ ಸಮಸ್ಯೆ ಬಗ್ಗೆ ಚರ್ಚಿಸಲು ದೇವೇಗೌಡರಿಗೆ ಆಹ್ವಾನಿಸಿದ್ದಾರೆ.
ಆಹ್ವಾನದ ಹಿನ್ನೆಲೆಯಲ್ಲಿ ದೇವೇಗೌಡರು ಪಕ್ಷದ ಮೀಟಿಂಗ್ ಬಿಟ್ಟು ದೆಹಲಿಗೆ ಹೊರಟಿದ್ದಾರೆ. ಹಳೇ ಮೈಸೂರು ಭಾಗದ ಅಭ್ಯರ್ಥಿ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನ ಕುಮಾರಸ್ವಾಮಿ ಅವರಿಗೆ ವಹಿಸಿ ದೆಹಲಿಗೆ ದೇವೇಗೌಡರು ದೌಡಾಯಿಸಿದ್ದಾರೆ. ಸಂಜೆ 5.30 ಕ್ಕೆ ದೆಹಲಿಯ ಜವಾಹರ ಭವನದಲ್ಲಿ ಪ್ರಧಾನಿ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಜಿಎಸ್ಟಿ ಜಾರಿಯ ದಿನ ಪ್ರಧಾನಿ ಪಕ್ಕ ಹೆಚ್ಡಿ ದೇವೇಗೌಡರಿಗೆ ಆಸನ ನೀಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ದೇವೇಗೌಡರ ಬಗ್ಗೆ ಬಿಜೆಪಿ ವಿಶೇಷ ಆಸಕ್ತಿ ತೋರಿಸುತ್ತಿರುವುದು ಎಲ್ಲರ ಹುಬ್ಬೇರಿಸಿದೆ.